ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿರುವ ನೈಟ್ ಕ್ಲಬ್ ನಲ್ಲಿ ಶನಿವಾರ ಮಧ್ಯರಾತ್ರಿಯ ವೇಳೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಪಾರ್ಟಿಗೆ ತೆರಳಬೇಕಿದ್ದ ದೆಹಲಿಯ ಪ್ರವಾಸಿಗ ವಿಮಾನ ವಿಳಂಭವಾಗಿದ್ದರಿಂದ ಜೀವ ಉಳಿಸಿಕೊಂಡಿದ್ದಾರೆ.
ಪಾರ್ಟಿಗೆ ಹೋಗಿದ್ದರೆ ಏನಾಗ್ತಿತ್ತೋ..?
ದೆಹಲಿಯಿಂದ ಗೋವಾಕ್ಕೆ ಬಂದಿದ್ದ ಪ್ರವಾಸಿಗ ನಿಖ್ನೇಶ್ ರವರು 10.30 ರ ಸುಮಾರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಗೋವಾದಲ್ಲಿ ಹಡಪಡೆಯಲ್ಲಿ ಬುಕ್ ಮಾಡಿದ್ದ ಹೋಟೆಲನ್ನು ರಾತ್ರಿ 12 ಗಂಟೆಯ ವೇಳೆಗೆ ತಲುಪಿದರು. ಹಡಪಡೆಯಲ್ಲಿ ನೈಟ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪಾರ್ಟಿಗೆ ತೆರಳಲು ಪ್ಲ್ಯಾನ್ ಹಾಕಿ ಸಿದ್ಧತೆ ಮಾಡಿಕೊಳ್ಳುವಷ್ಟರಲ್ಲಿ ಈ ಅಗ್ನಿ ಅವಘಡದ ಮಾಹಿತಿ ಬಂತು. ಇದರಿಂದಾಗಿ ನೈಟ್ ಕ್ಲಬ್ ಡಿಜೆ ಪಾರ್ಟಿಗೆ ಹೋಗಲಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಪಾರ್ಟಿಗೆ ಹೋಗಿದ್ದರೆ ಏನಾಗುತ್ತಿತ್ತೋ ಏನೊ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಸ್ನೇಹಿತನಿಗೆ ಕರೆ ಹೋಗುತ್ತಿಲ್ಲ…!
ಹಡಪಡೆಯಲ್ಲಿ ಅಗ್ನಿ ದುರಂತದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದಿದ್ದ ಕಿರಣ್ ಪಾಟೀಲ್ ಎಂಬ ಪ್ರವಾಸಿಗರು ತನ್ನ ಸ್ನೇಹಿತನಿಗೆ ಪೋನ್ ಕರೆ ಹೋಗುತ್ತಿಲ್ಲ. ಸ್ನೇಹಿತ ಇದೇ ನೈಟ್ ಬಾರ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ. ಅವನಿಗೆ ನಿನ್ನೆ ರಾತ್ರಿ ಪಾಳಿಯಿತ್ತು. ಅವನ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ದೂರವಾಣಿ ಕರೆ ಮಾಡಿದರೆ ಕರೆ ಹೋಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೈಟ್ ಕ್ಲಬ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ಪೂರ್ಣಾ ಬಹಾದ್ದೂರ್, ಝಾರ್ಖಂಡ್ ಮೂಲದ ಇಬ್ಬರು ಸಹೋದರರು ಕೂಡ ಅಗ್ನಿ ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಇವರ ಸಂಬಂಧಿಕರು ಬಂದು ತಮ್ಮ ದುಃಖ ತೋಡಿಕೊಂಡಿದ್ದಾರೆ.
