ಸುದ್ದಿ ಕನ್ನಡ ವಾರ್ತೆ
ಶಿರಸಿ : ಇತ್ತೀಚಿಗೆ ಶ್ರೀ ಸ್ವರ್ಣವಲ್ಲಿ ಶ್ರೀಗಳನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ.ದೇಶಪಾಂಡೆ ಸೋಂದಾದಲ್ಲಿ ಭೇಟಿ ಮಾಡಿ ದರ್ಶನ-ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದೇಶಪಾಂಡೆ ಅವರು ಬೆಡ್ತಿ-ಅಘನಾಶಿನಿ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಬಿಡಬೇಕು ಎಂದು ತಾವು ಬರೆದ ಪತ್ರಗಳ ಪ್ರತಿಯನ್ನು ಪೂಜ್ಯ ಶ್ರೀಗಳಿಗೆ ನೀಡಿದರು. ಬೆಡ್ತಿ ಯೋಜನೆಯಿಂದ ಉ.ಕ ಜಿತ್ಗೆ ಏನು ಪ್ರಯೋಜನ ಇಲ್ಲ, ಇದು ವಿಫಲ ಯೋಜನೆ ಆಗುತ್ತದೆ. 2022 ರಲ್ಲೂ ತಾವು ಈ ಯೋಜನೆ ನಿರರ್ಥಕ ಎಂದೇ ಹೇಳಿದ್ದನ್ನು ದೇಶಪಾಂಡೆ ಅವರು ನೆನಪಿಸಿದರು.
ಪೂಜ್ಯ ಸ್ವರ್ಣವಲ್ಲಿ ಶ್ರೀಗಳು 1992 ರಲ್ಲಿ ದೆಹಲಿಗೆ ಬೆಡ್ತಿ ನಿಯೋಗ ಹೋಗಿದ್ದನ್ನು ದೇಶಪಾಂಡೆ ಅವರ ಗಮನಕ್ಕೆ ತಂದರು. ಈಗ ಪುನಃ ಎಲ್ಲ ಶಾಸಕರು, ಸಂಸದರ ಜೊತೆ ಸಿ.ಎಂ. ಭೇಟಿ ಮಾಡಬೇಕು ಎಂಬ ಬೆಡ್ತಿ ಸಮಿತಿ ಪತ್ರವನ್ನು ದೇಶಪಾಂಡೆ ಅವರಿಗೆ ನೀಡಿದರು.
ಶಿರಸಿ & ಯಲ್ಲಾಪುರ ಶಾಸಕರ ಜೊತೆ ಸಿ.ಎಂ. ಭೇಟಿ ಮಾಡುತ್ತೇವೆ ಎಂಬ ಭರವಸೆಯನ್ನು ದೇಶಪಾಂಡೆ ನೀಡಿದರು. ಬೆಡ್ತಿ-ಅಘನಾಶಿನಿ ಉಳಿಸಿ ಎಂಬ ಸೆ.10 ರ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂಬ ಪತ್ರವನ್ನು ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ದೇಶಪಾಂಡೆ ಅವರಿಗೆ ನೀಡಿದರು.
ಭಟ್ಟಳದ ರಾಮಾಮೋಗೆರ, ರಮೇಶ ದುಬಾಶಿ, ದೀಪಕ್ ದೊಡ್ಡೂರು, ವೆಂಕಟೇಶ್ ಹೊಸಬಾಳೆ, ನಿತಿನ್ ಕಾಸರಕೋಡ, ಶ್ರೀ ಮಠದ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ, ಕಾರ್ಯದರ್ಶಿ ಜಿ.ವಿ.ಹೆಗಡೆ, ಆರ್.ಎನ್.ಹೆಗಡೆ ಮುಂತಾದವರಿದ್ದರು.
