ಸುದ್ದಿ ಕನ್ನಡ ವಾರ್ತೆ
​ಮುಂಬೈ: ದೇಶದ ಆರ್ಥಿಕ ರಾಜಧಾನಿಯ ಜೀವನಾಡಿ ಎಂದೇ ಕರೆಯಲಾಗುವ ಮುಂಬೈ ಲೋಕಲ್ ರೈಲಿನಲ್ಲಿ ನಡೆದಿದ್ದ ಯುವಕನ ಹತ್ಯೆ ಪ್ರಕರಣವನ್ನು ರೈಲ್ವೆ ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿದ್ದಾರೆ.

ನಲಾಸೋಪಾರಾ ಫಾಸ್ಟ್ ಲೋಕಲ್ ರೈಲಿನ ಪ್ರಥಮ ದರ್ಜೆ ಭೋಗಿಯಲ್ಲಿ ಬಾಗಿಲು ಮುಚ್ಚುವ ವಿಚಾರವಾಗಿ ಆರಂಭವಾದ ಸಣ್ಣ ಜಗಳ ಕೊನೆಗೆ ಭೀಕರ ಹತ್ಯೆಗೆ ಕಾರಣವಾಗಿತ್ತು.

​ಮೃತನನ್ನು 22 ವರ್ಷದ ಮಯಾಂಕ್ ಲೋಹರ್ ಎಂದು ಗುರುತಿಸಲಾಗಿದೆ. ಮಳೆ ಹಿನ್ನೆಲೆಯಲ್ಲಿ ರೈಲಿನ ಬಾಗಿಲು ತೆರೆದಿಡಬೇಕೋ ಅಥವಾ ಮುಚ್ಚಬೇಕೋ ಎಂಬ ವಿಚಾರದಲ್ಲಿ ಸಹ ಪ್ರಯಾಣಿಕ ರೋಷನ್ ಸುವರ್ಣನೊಂದಿಗೆ ವಾಗ್ವಾದ ನಡೆದಿದ್ದು, ಅದು ತೀವ್ರ ಸ್ವರೂಪ ಪಡೆದು ಚಾಕು ಇರಿತಕ್ಕೆ ತಿರುಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

​ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿ ರೋಷನ್ ಸುವರ್ಣನನ್ನು ನೂರಾರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಹಾಗೂ ತಾಂತ್ರಿಕ ನಿಗಾವ್ಯವಸ್ಥೆಯ ನೆರವಿನಿಂದ ಪೊಲೀಸರು ಪತ್ತೆಹಚ್ಚಿದರು. ಆರೋಪಿ ಧರಿಸಿದ್ದ ಟಿ-ಶರ್ಟ್‌ನ ಮೇಲಿದ್ದ ಕಂಪನಿಯ ಲೋಗೋ ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿತು. ನಂತರ ಪನವೇಲ್‌ನಲ್ಲಿ ಆರೋಪಿಯನ್ನು ಬಂಧಿಸಲಾಯಿತು.
​ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಜೂನ್ 30ರವರೆಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ಹಿನ್ನೆಲೆ ಹಾಗೂ ಹತ್ಯೆಗೆ ಬಳಸಿದ ಆಯುಧದ ಕುರಿತು ತನಿಖೆ ಮುಂದುವರಿದಿದೆ.