ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ಅಕ್ರಮವಾಗಿ ಲಾರಿಯಲ್ಲಿ ಹಿಂಸಿಸಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 19 ದಷ್ಟಪುಷ್ಟ ಜಾನುವಾರುಗಳನ್ನು ಇಲ್ಲಿಯ ಪೊಲೀಸರು ರಕ್ಷಿಸಿ, ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೋಮವಾರ ತಡರಾತ್ರಿಯ ಸಮಯದಲ್ಲಿ ಲಾರಿ ಚಾಲಕ ಮಹಮ್ಮದ್ ರಫಿ ಜಾಫ‌ರ್ ಪಾಷಾ ಹಾಗೂ ಕ್ಲೀನರ್ ಬೆಲ್ಲದಬಾಗೇವಾಡಿಯ ದ್ಯಾನೇಶ ಮೈಸುರು ಎಂಬುವವರು ಯಾವುದೇ ಪರವಾನಗಿ ಇಲ್ಲದೇ ಈಚರ್ ಲಾರಿಯಲ್ಲಿ 12 ಹೋರಿಗಳು, 4 ಕೋಣಗಳು, 3 ಎಮ್ಮೆಗಳು ಸೇರಿದಂತೆ ಒಟ್ಟೂ 19 ಜಾನುವಾರುಗಳನ್ನು ವಧೆ ಮಾಡಲು ಕೇರಳದ ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಈ ಜಾನುವಾರುಗಳನ್ನು ಲಾರಿಯೊಳಗೆ ಅತ್ಯಂತ ಹಿಂಸಾತ್ಮಕವಾಗಿ ಕಟ್ಟಿಕೊಂಡು ಹುಬ್ಬಳ್ಳಿ ಕಡೆಯಿಂದ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಪಟ್ಟಣದ ಜೋಡುಕೆರೆಯ ಸಮೀಪ ದಾಳಿ ನಡೆಸಿದ ಪೊಲೀಸರು ಜಾನುವಾರುಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಾನುವಾರುಗಳ ಮೌಲ್ಯ 4.85 ಲಕ್ಷ ರೂ ಹಾಗೂ ಲಾರಿಯ ಮೌಲ್ಯ 6 ಲಕ್ಷ ರೂ ಎಂದು ಅಂದಾಜಿಸಲಾಗಿದೆ.ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ಧಾಖಲಿಸಿಕೊಂಡು ಮುಂ್ಇನ ತನಿಖೆ ಕೈಗೊಂಡಿದ್ದಾರೆ.