ಸುದ್ದಿ ಕನ್ನಡ ವಾರ್ತೆ
ಹಳಿಯಾಳ: ಕ್ರೂಸರ್ ವಾಹನ ಹಾಗೂ ಮಾರುತಿ ಎರ್ಟಿಗಾ ಕಾರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕ್ರೂಜರ್ ಸವಾರ ಓರ್ವ ಸ್ಥಳದಲ್ಲಿ ಸಾವನ್ನಪ್ಪಿರುವ ದುರ್ಘಟನೆ ಹಳಿಯಾಳ ದಾಂಡೇಲಿ ರಾಜ್ಯ ಹೆದ್ದಾರಿಯ ಕೆಸರೊಳ್ಳಿ ಕ್ರಾಸ್ ಸಮೀಪ ಗುರುವಾರ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮುನವಳ್ಳಿ ಬಳಿಯ ಗ್ರಾಮದವನಾಗಿದ್ದು ಮಂಜುನಾಥ ಕಣವಿ ಎಂದು ಗುರುತಿಸಲಾಗಿದೆ. ಕ್ರೂಸರ್ ವಾಹನ ಮುನವಳ್ಳಿಯಿಂದ ಶ್ರೀ ಕ್ಷೇತ್ರ ಉಳವಿಗೆ ತೆರಳುತ್ತಿತ್ತು ಮತ್ತು ಎದುರಿನಿಂದ ಬಂದ ಎರ್ಟಿಗಾ ವಾಹನ ದಾಂಡೇಲಿಯಿಂದ ಧಾರವಾಡಕ್ಕೆ ತೆರಳುತ್ತಿತ್ತು. ಈ ಅಪಘಾತದ ರಭಸಕ್ಕೆ ಓರ್ವ ಸಾವನ್ನಪ್ಪಿದ್ದರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ರವಾನಿಸಲಾಗಿದೆ. ಉಳಿದಂತೆ 15 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಜೈಪಾಲ್ ಪಾಟೀಲ್, ಪಿಎಸ್ಐ ಕೃಷ್ಣ ಅರ್ಕೆರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿಯಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
