ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಕುಮಟಾ ತಾಲೂಕಿನ ನಿವಾಸಿ ಸವಿತಾ ಮಹಾಬಲೇಶ್ವರ ಅಂಬಿಗ ಅವರು ಹೆಬಳೆಯಿಂದ ಭಟ್ಕಳ ಬಸ್ ನಿಲ್ದಾಣಕ್ಕೆ ರಿಕ್ಷಾದಲ್ಲಿ ಆಗಮಿಸಿ, ಕುಮಟಾಕ್ಕೆ ತೆರಳುವ ಆತುರದಲ್ಲಿ ತಮ್ಮ ಬ್ಯಾಗನ್ನು ರಿಕ್ಷಾದಲ್ಲೇ ಮರೆತು ಹೋಗಿದ ಘಟನೆ ನಡೆದಿದೆ.

ಬ್ಯಾಗಿನಲ್ಲಿ ಬಟ್ಟೆಗಳ ಜೊತೆಗೆ ಸುಮಾರು ಎಂಟು ತೊಲೆ ಬಂಗಾರದ ಆಭರಣಗಳಿದ್ದವು. ಬಂಗಾರದ ಆಭರಣಗಳಿರುವ ಬ್ಯಾಗು ಕಳೆದುಹೋದ ಕುರಿತು ಮಾಹಿತಿ ಪೊಲೀಸರ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿತ್ತು.
ಈ ಮಾಹಿತಿ ಗಮನಿಸಿದ ರಿಕ್ಷಾ ಚಾಲಕ, ತೆಂಗಿನಗುಂಡಿ ನಿವಾಸಿ ಮೋಹನ ತಿಮ್ಮಪ್ಪ ನಾಯ್ಕ, ತಕ್ಷಣ ತಮ್ಮ ರಿಕ್ಷಾವನ್ನು ಪರಿಶೀಲಿಸಿದ್ದು, ಪ್ರಯಾಣಿಕರು ಕುಳಿತುಕೊಳ್ಳುವ ಹಿಂಭಾಗದಲ್ಲಿ ಬ್ಯಾಗು ಪತ್ತೆಯಾಗಿದೆ.
ಅವರು ಕೂಡಲೇ ಬ್ಯಾಗನ್ನು ಭಟ್ಕಳ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. ಎಎಸ್‌ಐ ಮಂಜುನಾಥ ಗೌಡರ ಅವರ ಮೂಲಕ ಬ್ಯಾಗನ್ನು ಅದರ ಮಾಲಕಿ ಸವಿತಾ ಮಹಾಬಲೇಶ್ವರ ಅಂಬಿಗ ಅವರಿಗೆ ಸುರಕ್ಷಿತವಾಗಿ ವಾಪಸ್ಸು ನೀಡಲಾಯಿತು.

ಪ್ರಾಮಾಣಿಕತೆ ಹಾಗೂ ಮಾನವೀಯತೆಯನ್ನು ಮೆರೆದ ರಿಕ್ಷಾ ಚಾಲಕ ಮೋಹನ ತಿಮ್ಮಪ್ಪ ನಾಯ್ಕ ಅವರ ಈ ಶ್ಲಾಘನೀಯ ಕಾರ್ಯಕ್ಕೆ ಪೊಲೀಸರು ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.