ಸುದ್ಧಿಕನ್ನಡ ವಾರ್ತೆ
ಬನಹಟ್ಟಿ: ಸಮೀಪದ ಹಿಪ್ಪರಗಿ ಬ್ಯಾರೇಜ್ ನಲ್ಲಿ ಗೇಟ್ ಮುಚ್ಚುವ ಸಂದರ್ಭದಲ್ಲಿ  ತಾಂತ್ರಿಕ ದೋಷದಿಂದಾಗಿ ಮುಚ್ಚಲು ಸಾಧ್ಯವಾಗದೆ ಇರುವುದರಿಂದ ೧೫ ಸಾವಿರ ಕ್ಯೂಸೆಕ್ ನೀರಿನ ಹೊರ ಹರಿವು ಇದೆ ಎಂದು  ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ತಿಳಿಸಿದರು.
ಎರಡು ದಿನಗಳಿಂದ ಗೇಟ್ ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ವಿಷಯವನ್ನು ಬ್ಯಾರೇಜ್ ಎಂಜಿನಿಯರ್ ಗಮನಕ್ಕೆ ತಂದಿದ್ದರು. ಬುಧವಾರ ಪರಿಶೀಲಿಸಲಾಗಿ ಅಥಣಿಯಿಂದ  ರಬಕವಿ ಬನಹಟ್ಟಿ ತಾಲ್ಲೂಕಿನ ಕಡೆಗೆ ಇರುವ ೭ ನೇ ನಂಬರಿನ ಗೇಟ್ ನಲ್ಲಿ ತೊಂದರೆಯಾಗಿದೆ.
ಗೇಟ್ ಅಳವಡಿಕೆಯಲ್ಲಿ ಉಂಟಾದ ತೊಂದರೆಯಿAದಾಗಿ ಜಲಾಶಯದಿಂದ ೧೫ ಸಾವಿರ ಕ್ಯೂಸೆಕ್ ಹೊರ ಹರಿವು ಇದ್ದು, ಕೃಷ್ಣಾ ನದಿಗೆ ಮಹಾರಾಷ್ಟ್ರ ಮತ್ತು ಸ್ಥಳೀಯ ಉಪ ನದಿಗಳಿಂದ ೧೨ ಸಾವಿರ ಕ್ಯೂಸೆಕ್ ಒಳ ಹರಿವು ಇದೆ.
ಒಟ್ಟು ೬ ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ೪.೫ ಟಿಎಂಸಿ ನೀರಿನ ಸಂಗ್ರಹವಿದೆ.
ಸದ್ಯ ಕೆ ಎನ್ ಎನ್ ಎಲ್ ಅಧೀಕ್ಷಕರು, ಮತ್ತು ಬ್ಯಾರೇಜ್ ಸಹಾಯಕ ಎಂಜಿನಿಯರ್ ಸ್ಥಳದಲ್ಲಿದ್ದು ಗೇಟ್ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ದುರಸ್ತಿ ಕಾರ್ಯ ನಡೆದಿದ್ದು, ಬುಧವಾರ ರಾತ್ರಿ ಇಲ್ಲವೆ ನಾಳೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ನೀರಿನ ಯಾವುದೆ ಸಮಸ್ಯೆಯಾಗುವುದಿಲ್ಲ ಎಂದು  ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ತಿಳಿಸಿದರು.
ಹಿಪ್ಪರಗಿ ಜಲಾಶಯದಲ್ಲಿ ಹೊರ ಹರಿವು ಇರುವುದರಿಂದ ರಬಕವಿ ಬನಹಟ್ಟಿ  ಸಮೀಪದಲ್ಲಿರುವ ಹಿನ್ನೀರು ಸಂಪೂರ್ಣವಾಗಿ ಖಾಲಿಯಾಗಿರುವುದು.
ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಬ್ಯಾರೇಜ್ ಎಇಇ ಶಿವಮೂರ್ತಿ, ವಿ.ಎನ್. ನಾಯಕ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.