ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ರಂಗಮಂದಿರದಲ್ಲಿ ತಾಲೂಕಾ ಪಂಚಾಯತ ಜೋಯಿಡಾ (ಉತ್ತರಕನ್ನಡ),ಗ್ರಾಮ ಪಂಚಾಯತ ನಂದಿಗದ್ದೆ ಇವುಗಳ ಸಹಯೋಗದಲ್ಲಿ ಹರಿಪ್ರಿಯಾ ಸಂಜೀವಿನಿ ಗ್ರಾಮ ಪಂಚಾಯತ ಒಕ್ಕೂಟ (ರಿ)ಗ್ರಾಮ ಪಂಚಾಯತ ನಂದಿಗದ್ದೆ ಇವರ ಹತ್ತನೇ ವಾರ್ಷಿಕ ಸಾಮಾನ್ಯ ಸಭೆ – 2025, ಪಂಚಾಯತ ಮಟ್ಟದ ಸಾವಯವ ಉತ್ಪನ್ನ ಮೇಳ ಮತ್ತು ಉಚಿತ ಆರೋಗ್ಯ ಶಿಬಿರ ದಿನಾಂಕ:17 – 10 – 2025 ರಂದು ನಡೆಯಿತು. ಕಾರ್ಯಕ್ರಮವನ್ನು ಸಂಘ ಗೀತೆಯೊಂದಿಗೆ ಆರಂಭಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ ಉದ್ಘಾಟಿಸಿ ಮಾತನಾಡಿ ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಸ್ವಸಹಾಯ ಸಂಘಗಳು ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು. ಹರಿಪ್ರೀಯಾ ಸಂಜೀವಿನಿ ಒಕ್ಕೂಟದ ವಾರ್ಷಿಕ ವರದಿಯನ್ನು ಮಂಗಲಾ ಉಪಾಧ್ಯ ಓದಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಬ್ದುಲ್ ನಜೀರ ಸಾಬ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ಭಾಗವತ ಮಾತನಾಡಿ ಸಮಾಜದಲ್ಲಿ ಸ್ವಸಹಾಯ ಸಂಘಗಳ ಪಾತ್ರ, ಮಹತ್ವ, ತರಬೇತಿ,ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಸಭೆಯ ಗಮನಕ್ಕೆ ತಂದರು. ಹೊನ್ನಪ್ಪ ಹಲಗೇರ ತಾಲೂಕಾ ಕಾರ್ಯಕ್ರಮ ಎಲ್.ಆರ್.ಎಲ್.ಎಮ್ ಜೋಯಿಡಾ ಮಾತನಾಡಿ ಸರ್ಕಾರಗಳು ಮಹಿಳೆಯರನ್ನು ಸಾಮಾಜಿಕ, ಆರ್ಥಿಕ,ಶೈಕ್ಷಣಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡುತ್ತಿದೆ. ಜೊತೆಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ,ಗ್ರಾಮದ ಎಲ್ಲಾ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರಾಗುವಂತೆ ಪ್ರೇರಿಪಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಶೈಕ್ಷಣಿಕ ಸ್ಥಿತಿ ಹಾಗೂ ಆರ್ಥಿಕ ಮಟ್ಟ ಸುಧಾರಣೆಗೆ ಸ್ವಸಹಾಯ ಸಂಘಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಾಲ ಹಾಗೂ ಸ್ವ ಉದ್ಯೋಗ ಮಾಡಲು ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಈ ಎಲ್ಲಾ ಯೋಜನೆಗಳ ಲಾಭ ಪಡೆಯಬೇಕಾದರೆ ಶೈಕ್ಷಣಿಕ ವಾಗಿ ಮಹಿಳೆಯರು ಶಿಕ್ಷಿತರಾಗಿ,ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ರಾಜ್ಯ ಸರ್ಕಾರವು ಜೋಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ಕೃಷಿಯ ತಾಲೂಕನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ.ಸ್ವಸಹಾಯ ಸಂಘಗಳ ಒಕ್ಕೂಟದ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಹಕಾರ ನೀಡಬೇಕು,ಸ್ವಸಹಾಯ ಸಂಘಗಳ ಸದಸ್ಯರು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಬೇಕೆಂದು ಹೇಳಿದರು. ಸಂತೋಷ ಪಾಟೀಲ ತಾಲೂಕಾ ವ್ಯವಸ್ಥಾಪಕರು ಮಾತನಾಡಿ ಸ್ವಸಹಾಯ ಸಂಘದಲ್ಲಿನ ಸಿಬ್ಬಂದಿಗಳ,ಸಖಿಗಳ ಪಾತ್ರದ ಕುರಿತು,ಸ್ವಸಹಾಯ ಸಂಘಗಳ ವಾರ್ಷಿಕ ಸಭೆಯ ಉದ್ದೇಶ ಕುರಿತು,ಆಹಾರ ಉತ್ಪನ್ನದ ಗುಣಮಟ್ಟ,ಮಾರುಕಟ್ಟೆಯ ಇನ್ನಿತರ ವಿಷಯದ ಕುರಿತು ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕರಾದ ಸುವರ್ಣಾ ಗಾವಡೆ,ಸದಸ್ಯರಾದ ಶೋಭಾ ಎಲ್ಲೇಕರ ಕಾರ್ಯಕ್ರಮ ದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.ಪಿ.ರಾಮಕೃಷ್ಣ ವ್ಯವಸ್ಥಾಪಕರು ಕರ್ನಾಟಕ ಗ್ರಾಮೀಣ ಬ್ಯಾಂಕನ ಯೋಜನೆಗಳ ಮಾಹಿತಿ ನೀಡಿದ ದರು.

ಅಧ್ಯಕ್ಷರು ಹರಿಪ್ರಿಯಾ ಸಂಜೀವಿನಿ ಒಕ್ಕೂಟ ಸುಕನ್ಯಾ ದೇಸಾಯಿ ಮಾತನಾಡಿ ನಮ್ಮ ತಾಲೂಕನ್ನು ಸಂಪೂರ್ಣ ಸಾವಯವ ಕೃಷಿಯನ್ನು ಮಾಡುವ ನಿಟ್ಟಿನ ಪರಿಕಲ್ಪನೆಯನ್ನು ನೀಡುವ ದೃಷ್ಟಿಯಿಂದ ಸಾವಯವ ಉತ್ಪನ್ನ ಮೇಳ ಹಮ್ಮಿಕೊಂಡಿದ್ದು,ಸಾವಯವ ಉತ್ಪನ್ನಗಳ ಗುಣಮಟ್ಟ,ಮಾರುಕಟ್ಟೆಯ ಕುರಿತು,ಸಮಾಜದಲ್ಲಿ ಸ್ವಸಹಾಯ ಸಂಘಗಳ ಪಾತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾವಯವ ಉತ್ಪನ್ನ ಮೇಳದಲ್ಲಿ ಸಾವಯವ ಉತ್ಪನ್ನಗಳ ಪ್ರದರ್ಶನ,ಮಾರಾಟ ನಡೆಯಿತು.ಸನ್ಮಾನ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎಮ್.ಬಿ.ಕೆ ಭಾರತಿ ಹೆಗಡೆ ಹಾಗೂ ಕಾರ್ಮೆಲಿನ್ ಎಮ್ ಪೆರೆರಾ ಅವರನ್ನು ಗಣ್ಯರು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಮಾತನಾಡಿದ ಎಮ್.ಬಿ.ಕೆ ಭಾರತಿ ಹೆಗಡೆ ತನ್ನ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿದ್ದು ಸಂತಸ ತಂದಿದೆ,ಇದಕ್ಕೆಲ್ಲಾ ಸಂಘದ ಎಲ್ಲಾ ಸದಸ್ಯರ ಸಹಕಾರ ಎಂದು ಧನ್ಯವಾದ ಸಲ್ಲಿಸಿದರು.
ಉತ್ತಮ ಸಂಘಗಳಿಗೆ ಪ್ರಶಸ್ತಿ ಪ್ರಥಮ,ದ್ವಿತೀಯ ಹಾಗೂ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ ವಿಜಯಾ ನಾಯ್ಕ ಉಚಿತ ಆರೋಗ್ಯ ಶಿಬಿರವನ್ನು ನಡೆಸಿಕೊಟ್ಟರು.ಅಧ್ಯಕ್ಷರು ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ,ಸಂಘಗಳ ಸದಸ್ಯರು ಹರಿಪ್ರಿಯಾ ಸಂಜೀವಿನಿ ಗ್ರಾಮ ಪಂಚಾಯತ ಒಕ್ಕೂಟದವರು,ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.