ಸುದ್ದಿ ಕನ್ನಡ ವಾರ್ತೆ
ಭಟ್ಕಳ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ಯಾರೋ ಕಳ್ಳರು ಹುಂಡಿ ಒಡೆದು ಒಳಗಿದ್ದ ಹಣ ಕದ್ದೊಯ್ದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಕಳ್ಳರು ಸಿಸಿಟಿವಿ ಕ್ಯಾಮರಾಗಳಿಗೆ ಬಟ್ಟೆ ಹಾಗೂ ನೀರಿನ ಲೋಟ ಮುಚ್ಚಿ ಕುತಂತ್ರದ ಮೂಲಕ ದುಷ್ಕೃತ್ಯ ಎಸಗಿದ್ದು, ಹುಂಡಿ ಒಡೆದು ಹಣವನ್ನು ದೋಚಿಕೊಂಡು ಹುಂಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಈ ದೇವಸ್ಥಾನದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಅರೇಕಲ್ ಜಟಕಾ ಮಹಾಸತಿ ದೇವಸ್ಥಾನಕ್ಕೂ ಕಳ್ಳರು ನುಗ್ಗಿ ಅಲ್ಲಿಯೂ ಸಹ ಹುಂಡಿ ಕದ್ದೊಯ್ದಿದ್ದಾರೆ. ಹಿಂದಿನ ಕಳ್ಳತನದ ತನಿಖೆ ಇನ್ನೂ ಮುಗಿಯುವ ಮುನ್ನವೇ ಮತ್ತೊಂದು ಕೃತ್ಯ ನಡೆದಿರುವುದರಿಂದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆಯ ಪರಿಶೀಲನೆಗೆ ಪೋಲೀಸರು ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿದ್ದು ಅವರ ಸಹಾಯ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಮಧ್ಯೆ ಹೆಬಳೆ ಕುಕ್ಕನೀರ್ ವೆಂಕಟಾಪುರ ಮಾರ್ಗದಲ್ಲಿ ತಾಮ್ರದ ಹಂಡೆ ಪತ್ತೆಯಾದ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹಂಡೆಯ ಸ್ಥಳೀಯರೋರ್ವರ ಹೆಸರು ಬರೆಯಲಾಗಿದ್ದು ಇದು ದೇವಾಲಯ ಕಳ್ಳತನಕ್ಕೆ ಸಂಬAಧಿಸಿರಬಹುದೇ ಎನ್ನುವ ಕುರಿತು ಶಂಕೆ ವ್ಯಕ್ತವಾಗಿದೆ. ಪೊಲೀಸರು ಹಂಡೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಕಳ್ಳರನ್ನು ಪತ್ತೆ ಹಚ್ಚುವ ಭರವಸೆಯನ್ನು ನೀಡಿದ್ದಾರೆ.