ಸುದ್ದಿ ಕನ್ನಡ ವಾರ್ತೆ

ಜೊಯಿಡಾ : ನದಿ ತಿರುವು ಯೋಜನೆಗಳನ್ನು ವಿರೋಧಿಸಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಸೂಚನೆಯಂತೆ ಯುಗಾದಿ ಪಾಡ್ಯದಿಂದ ರಾಮನವಮಿಯವರೆಗೆ ಅಂದರೆ 9 ದಿನಗಳ ಕಾಲ ಸಂಜೆ 4 ರಿಂದ 6 ರ ತನಕ ಎಲ್ಲ ದೇವಸ್ಥಾನಗಳಲ್ಲಿ ಭಜನಾ ಜಾಗ್ರತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಅದರಂತೆಯೇ ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದ ಶ್ರೀ ಸೋಮೇಶ್ವರ ದೇವರ ದೇವಸ್ಥಾನದಲ್ಲಿ ಭಜನಾ ಜಾಗ್ರತಿ ಅಭಿಯಾನ ಯುಗಾದಿ ಪಾಡ್ಯದಿಂದ ಈ ಅಭಿಯಾನ ಆರಂಭಗೊಂಡಿದೆ.

ಇಂದು ಆರಂಭಗೊಂಡ ಈ ಅಭಿಯಾನದಲ್ಲಿ ಗುಂದ ಸೀಮಾ ಪರಿಷತ್ ನ ಭಕ್ತರು ಹಾಗೂ ಮಾತೃ ಮಂಡಳಿಯ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ಸೋಮೇಶ್ವರ ದೇವರ ಸನ್ನಿಧಾನದಲ್ಲಿ ಭಜನಾ ಸೇವೆ ಸಲ್ಲಿಸಿದರು. ರಾಮನವಮಿಯವರೆಗೆ ಭಜನಾ ಸೇವೆ ನಡೆಯಲಿದೆ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಜನಾ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಗುಂದ ಸೀಮಾ ಪರಿಷತ್ ನ ಅಧ್ಯಕ್ಷರು ಹಾಗೂ ಮಾತೃಮಂಡಳಿಯ ಅಧ್ಯಕ್ಷರು ವಿನಂತಿಸಿದ್ದಾರೆ.