ಸುದ್ದಿ ಕನ್ನಡ ವಾರ್ತೆ
ಭಟ್ಕಳ:ತಾಲೂಕಿನಲ್ಲಿ ಅಕ್ರಮವಾಗಿ ಜಾನುವಾರಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದರ್ ರಸ್ತೆಯ ನಿವಾಸಿ ಸರ್ವೋಷ್ ಹುಸೇನ್ (37) ಹಾಗೂ ಬೆಂಗಳೂರಿನ ಶಣ್ಮುಖ ಕೆ.ಎಸ್. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಜಾನುವಾರು ಸಾಗಾಟಕ್ಕೆ ಅಗತ್ಯ ಪರವಾನಗಿ ಪಡೆಯದೇ, ವಾಹನದಲ್ಲಿ ಸುಮಾರು ಆರು ಲಕ್ಷ ರೂ. ಮೌಲ್ಯದ ಎರಡು ಕೋಣಗಳನ್ನು ಕೇರಳ ರಾಜ್ಯದ ಮಲಪ್ಪುರಂನಿಂದ ಭಟ್ಕಳಕ್ಕೆ ಸಾಗಾಟ ಮಾಡಿಕೊಂಡು ಬಂದು ಕಟ್ಟಿ ಹಾಕಿದ್ದರು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೆಂಕಟೇಶ ಮುರನಾಳ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯ ಪಿಎಸೈ ಮಲ್ಲಿಕಾರ್ಜುನ ಕೊರಾಣಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
