ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಪಟ್ಟಣದ TMS ಆಡಳಿತ ಅಧಿಕಾರಿಯ ವಿರುದ್ಧ ಟಿಎಂಎಸ್ ಉಳಿಸಿ ಹೋರಾಟ ಸಮಿತಿಯಿಂದ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದಲ್ಲಿ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವನ್ನು ಶುಕ್ರವಾರ ಪ್ರಾರಂಭಿಸಲಾಗಿದೆ. ಆಡಳಿತಾಧಿಕಾರಿ ವಿರುದ್ಧದ ಪ್ರತಿಭಟನೆ ಮೂರನೇಯ ದಿನಕ್ಕೆ ಕಾಲಿರಿಸಿದೆ.
ಮೊದಲನೇಯ ದಿವಸ TMS ಎದುರು ಧರಣಿ ನಡೆಸಲಾಗಿತ್ತು. ಗುರುವಾರ ಬಸ್ ನಿಲ್ದಾಣದ ಬಳಿ ರಸ್ತಾ ರೋಕೋ ನಡೆಸಲಾಗಿತ್ತು. ಶುಕ್ರವಾರ ಟಿಎಂಎಸ್ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದು, ಬೇಡಿಕೆಗೆ ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮಾತನಾಡಿದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಟಿಎಂಎಸ್ ಉಳಿವಿಗಾಗಿ ಕಠಿಣ ನಿಲುವು ತಳೆಯಲಾಗಿದ್ದು, ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಕಳೆದ ಎರಡು ಅವಧಿಯ ಆಡಳಿತದಲ್ಲಿ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ಹಾಗೂ ಶಾಸಕ ಶಿವರಾಮ ಹೆಬ್ಬಾರ ಸೇರಿ ಹಲವು ರೀತಿಯಲ್ಲಿ ತೊಂದರೆ ನೀಡಿದ್ದಾರೆ. ಈ ಮಾತನ್ನು ಅವರ ಎದುರಿನಲ್ಲಿಯೂ ಅಡಲು ಸಿದ್ಧನಿದ್ದೇನೆ. ಇದು ಸತ್ಯ ಎಂಬುದನ್ನು ಸಾಬೀತುಪಡಿಸಲು ಗಣಪತಿಯ ದೇವಸ್ಥಾನದಲ್ಲಿ ಪ್ರಮಾಣ ಮಾಡಲೂ ಸಿದ್ಧ ಎಂದು ಸವಾಲು ಹಾಕಿದರು.
ಮಾಜಿ ಮುಖ್ಯ ಕಾರ್ಯನಿರ್ವಾಹಕರು ಶಾಸಕರ ಆಶ್ರಯ ಪಡೆದು, ಸಂಸ್ಥೆಯ ವಿಷಯದಲ್ಲಿ ರಾಜಕೀಯದಲ್ಲಿ ತೋಡಗಿದ್ದಾರೆ. ಯಾರು ಏನೇ ಮಾಡಿದರೂ, ನಾವು ಸಂಸ್ಥೆ ಉಳಿವಿಗೆ ಹೋರಾಟ ಮಾಡುತ್ತಿದ್ದೇವೆ. ನಮಗೆ ಅಧಿಕಾರ ಮುಖ್ಯ ಅಲ್ಲ. ಸಂಸ್ಥೆಯ ಎಲ್ಲ ಸದಸ್ಯರು, ರೈತರು ಅಧಿಕಾರ ಬಿಡಿ ಎಂದು ಹೇಳಿದರೆ, ನಾನು ಅದಕ್ಕೂ ಸಿದ್ಧ. ರೈತರ ಕೈಯ್ಯಲ್ಲಿ ಸಂಸ್ಥೆಯ ಅಧಿಕಾರ ಇರಬೇಕು, ರೈತರುಸ್ವಾವಲಂಬಿ ಆಗಬೇಕು ಎಂಬುದು ನನ್ನ ಉದ್ದೇಶ ಎಂದರು.
ಕಟ್ಟಿಬೆಳೆಸಿದ ಸಂಸ್ಥೆಯಲ್ಲಿ ಆಡಳಿತಾಧಿಕಾರಿ ಆಟ ಆಡುತ್ತಿದ್ದು, ಆಡಳಿತಾಧಿಕಾರಿ ವಜಾ ಅಗಬೇಕು. ಸದಸ್ಯರ ಹಕ್ಕು ಕಸಿದುಕೊಳ್ಳುವ ಠರಾವು ವಾಪಸ್ ಪಡೆಯಬೇಕು. ಇದಕ್ಕೆ ಸರ್ಕಾರ ಸ್ಪಂದಿಸಬೇಕು. ಸಂಸ್ಥೆಯ ಹಿತಾಸಕ್ತಿಗೆ ಉಪವಾಸ ಪ್ರಾರಂಭಿಸಿದ್ದು, ನಾನು ಸತ್ತರೆ ಅದು ರೈತರ ಹಿತಕ್ಕಾಗಿ ಪಡೆದ ವೀರ ಮರಣ. ಏನೇ ಹೆಚ್ಚು ಕಡಿಮೆಯಾದಲ್ಲಿ ಈ ವ್ಯವಸ್ಥೆಯೇ ಅದಕ್ಕೆ ಹೊಣೆ ಎಂದು ಎಚ್ಚರಿಸಿದರು.
ದೆಹಲಿಯಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೂರವಾಣಿಯ ಮೂಲಕ ಮಾತನಾಡಿ, ಸಹಕಾರಿ ಸಂಸ್ಥೆಯ ಉಳಿವಿಗಾಗಿ ಉಪವಾಸ ನಡೆಸುವ ಹಂತಕ್ಕೆ ಬಂದಿರುವುದು ದುರದೃಷ್ಟಕರ.
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ, ರೈತ ಪರ ಧ್ವನಿಯಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ ಎಂದರು.
ಅಡಿಕೆ ವ್ಯವಹಾರಸ್ಥರ ಸಂಘದ ಸದಸ್ಯರು ಅಧ್ಯಕ್ಷ ರವಿ ಹೆಗಡೆ ನೇತೃತ್ವದಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ರಾಘವೇಂದ್ರ ಭಟ್ಟ, ಗಣಪತಿ ಮಾನಿಗದ್ದೆ, ಅಪ್ಪು ಅಚಾರಿ, ವೆಂಕಟ್ರಮಣ ಬೆಳ್ಳಿ, ಪ್ರಸಾದ ಹೆಗಡೆ, ವಿ.ಎಂ. ಹೆಗಡೆ, ಭಾಸ್ಕರ ಅಡಿಕೆಪಾಲ, ಶ್ರೀರಾಮ ಲಾಲಗುಳಿ, ಕೆ.ಟಿ. ಹೆಗಡೆ, ವಿ.ಟಿ. ಹೆಗಡೆ ಇತರರಿದ್ದರು.
