ಸುದ್ದಿ ಕನ್ನಡ ವಾರ್ತೆ

ಬೆಂಗಳೂರು : ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಅಧಿಕಾರಿಗಳು ದೇವಸ್ಥಾನಗಳಿಗೆ ಸೇರಬೇಕಾದ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಈ ಭಾರೀ ಭ್ರಷ್ಟಾಚಾರವನ್ನು ಕರ್ನಾಟಕ ಮಂದಿರ ಮಹಾಸಂಘವು ತೀವ್ರವಾಗಿ ಖಂಡಿಸುವುದರೊಂದಿಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸರಕಾರಕ್ಕೆ ಒತ್ತಾಯಿಸಿ ಆನೇಕಲ್ ತಾಲೂಕು ತಹಶೀಲ್ದಾರರಿಗೆ ಮನವಿ ನೀಡಲಾಯಿತು.

ಈ ಸಂಧರ್ಭದಲ್ಲಿ ಮಂದಿರ ಮಹಾಸಂಘದ ಬೆಂಗಳೂರು ಸಂಯೋಜಕರಾದ ಡಾ. ಬಿ.ಎನ್ ಮಹೇಶ್ ಕುಮಾರ್, ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಅರ್ಚಕ ಆಗಮಿಕ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಶ್ರೀನಿವಾಸ್ ವಿ ಗುರೂಜಿ, ಚನ್ನಕೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ. ಗೋವಿಂದ ಭಟ್,ಹಾಗೂ ಆನೇಕಲ್ ತಾಲೂಕಿನ ಅರ್ಚಕ ಸಂಘದ ಅಧ್ಯಕ್ಷರಾದ ಶ್ರೀ. ಶಿವಣ್ಣ ಆರಾಧ್ಯ, ಶಂಕರ್ ಮಠದ ಅರ್ಚಕರಾದ ಶ್ರೀ. ವೈದ್ಯನಾಥ ದೀಕ್ಷಿತ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ, ಶ್ರೀ. ಶಿವಕುಮಾರ್, ಶ್ರೀ. ರಾಜು ರೆಡ್ಡಿ.
ಶ್ರೀ. ಸಂಪಂಗಿ ರಾಮಯ್ಯ ಹಾಗೂ ಸ್ಥಳೀಯ ಹಿಂದುತ್ವವಾದಿಗಳು ಉಪಸ್ಥಿತರಿದ್ದರು.

ಪ್ರಮುಖ ಭ್ರಷ್ಟಾಚಾರ ಪ್ರಕರಣಗಳು :

1. ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಸಾಸಲು ಹೋಬಳಿಯ ರೆವೆನ್ಯೂ ಇನ್ಸೆಕ್ಟರ್ ಹೇಮಂತ್ ಕುಮಾರ್ ಈತ 2023 ರಿಂದ ಅಧಿಕಾರದಲ್ಲಿದ್ದು, ಇಬ್ಬರು ತಹಶೀಲ್ದಾರ್ ಮತ್ತು ಒಬ್ಬ ಕೇಸ್ ವರ್ಕನ್ರರ ಸಹಿ. ಮುದ್ರೆ ನಕಲಿ ಮಾಡಿ. ಧಾರ್ಮಿಕ ದತ್ತಿ ಇಲಾಖೆಯ 60 ಲಕ್ಷ ರೂಪಾಯಿಗಳನ್ನು ತನ್ನ ಹೆಂಡತಿ ಮತ್ತು ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿದ್ದಾನೆ.

2. ಲಿಂಗಸುಗೂರು, ರಾಯಚೂರು ಜಿಲ್ಲೆ
ಲಿಂಗಸುಗೂರಿನ ತಹಶೀಲ್ದಾರ್ ಕಚೇರಿಯ ದ್ವಿತಿಯ ದರ್ಜೆಯ ಸಹಾಯಕ ಯಲ್ಲಪ್ಪ, ದೇವಸ್ಥಾನಗಳ ಅರ್ಚಕರಿಗೆ ಮೀಸಲಿಟ್ಟ 1,87,86,561 ಹಣವನ್ನು ತನ್ನ ಹೆಂಡತಿ, ಮಕ್ಕಳ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆ.

ಕರ್ನಾಟಕ ಮಂದಿರ ಮಹಾಸಂಘದ ಬೇಡಿಕೆಗಳು :

1. ಈ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ವಿಶೇಷ ತನಿಖಾ ತಂಡ (SIT) ಅನ್ನು ನೇಮಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ, ಬಂಧಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಬೇಕು.
2. ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಈ ರೀತಿಯ ಭ್ರಷ್ಟಾಚಾರ ನಡೆಯುತ್ತದೆಯೇ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು.
3. ಧಾರ್ಮಿಕ ದತ್ತಿ ನಿಧಿಗಳ ದುರ್ಬಳಕೆ ತಡೆಯಲು ಕಠಿಣ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು.
4. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಣ ದೇವಾಲಯಗಳ ಅಭಿವೃದ್ಧಿ. ಧರ್ಮಪ್ರಸಾರ. ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಮಾತ್ರ ಬಳಸುವಂತೆ ಕ್ರಮ ಕೈಗೊಳ್ಳಬೇಕು.

ಕರ್ನಾಟಕ ಮಂದಿರ ಮಹಾಸಂಘವು ಈ ಬಗ್ಗೆ ಸರಕಾರದಿಂದ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದು, ಈ ದಿಶೆಯಲ್ಲಿ ಯಾವುದೇ ವಿಳಂಬವಾದಲ್ಲಿ ‘ಸಮಸ್ತ ಹಿಂದೂ ಸಮಾಜವು ರಾಜ್ಯವ್ಯಾಪಿ ಹೋರಾಟ ನಡೆಸಲು ಬದ್ದವಾಗಿದೆ’ ಎಂದು ಎಚ್ಚರಿಸಿದೆ.