ಸುದ್ದಿ ಕನ್ನಡ ವಾರ್ತೆ
ರಬಕವಿ-ಬನಹಟ್ಟಿ : ತಾಲೂಕಿನ ಹೊಸೂರಿನ ಜಯಶ್ರೀ ಸಿದ್ರಾಮಯ್ಯ ಮಠಪತಿ ಎಂಬ ಕಡು ಬಡತನದ ಯುವತಿ ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾಳೆ.

೫೪೫ ಪಿಎಸ್‌ಐ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯಲ್ಲಿ ಜಯಶ್ರೀ ಹೆಸರು ಇರುವದಕ್ಕೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

ಮಗಳನ್ನು ಯಾವುದಾದರೂ ಒಂದು ಹಂತಕ್ಕೆ ತರಲೇಬೇಕೆಂದು ತಂದೆ-ತಾಯಿ ದಿನಗೂಲಿ ಮಾಡಿ ಓದಿಸಿದ್ದರು. ಅವರ ಶ್ರಮಕ್ಕೆ ಮಗಳು ಇಂದು ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವರು ಕಂಡಿದ್ದ ಕನಸನ್ನು ನನಸು ಮಾಡಿದ್ದಾಳೆ. ಜಯಶ್ರೀ ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.

೧ ರಿಂದ ೫ ನೇ ತರಗತಿ ಇಲ್ಲಿನ ಶಾಂತಿ ನಗರದ ಸರ್ಕಾರಿ ಶಾಲೆ ನಂತರ ಪ್ರೌಢಶಾಲೆಯನ್ನು ಹೊಸೂರು ಸರ್ಕಾರಿ ಶಾಲೆಯಲ್ಲಿ ಮುಗಿಸಿ, ರಾಮಪೂರದ ಪೂರ್ಣಪ್ರಜ್ಞ ಪಪೂ ಕಾಲೇಜು, ಪದವಿಯನ್ನು ಜಮಖಂಡಿಯ ಬಿಎಲ್‌ಡಿಇ ನಂತರ ಬಿಎಡ್‌ನ್ನು ಬನಹಟ್ಟಿಯ ಎಸ್‌ಟಿಸಿ ಕಾಲೇಜಿನಲ್ಲಿ ಮುಗಿಸಿರುವ ಜಯಶ್ರೀ ವಿಜಯಪುರದ ಖಾಸಗಿ ಗ್ರಂಥಾಲಯದಲ್ಲಿ ಓದಿನ ಅಭ್ಯಾಸ ಮುಂದುವರೆಸಿದ್ದಳು.ಶಿಕ್ಷಕಿಯಾಗುವಾಸೆಯಿತ್ತು: ಬಿಎಸ್.ಸಿ. ಪದವಿ ನಂತರ ಬಿಎಡ್ ಮುಗಿಸಿಕೊಂಡು ಶಿಕ್ಷಕಳಾಗುವ ಆಸೆ ಹೊತ್ತಿದ್ದ ಜಯಶ್ರೀ ಅತ್ಯುನ್ನತ ಪರೀಕ್ಷೆಗಳನ್ನು ಎದುರಿಸುವ ಮೂಲಕ ಪಿಎಸ್‌ಐ ಹುದ್ದೆಗೆ ನೇಮಕಗೊಂಡಿರುವದು ಸಂತಸವೆನಿಸುತ್ತದೆ ಎಂದು ಜಯಶ್ರೀ ಪತ್ರಿಕೆಗೆ ತಿಳಿಸಿದ್ದಾಳೆ.

ಗ್ರಂಥಾಲಯ ಆಸರೆ: ಖಾಸಗಿ ಗ್ರಂಥಾಲಯಗಳಲ್ಲಿ ದಿನಂಪ್ರತಿ ಬೆಳಿಗ್ಗೆಯಿಂದ ಸಂಜೆವರೆಗೆ ಓದಿನೊಂದಿಗೆ ಗುಂಪು ಚರ್ಚೆ ಆಸರೆಯಾಗುವ ಮೂಲಕ, ಒಂದೇ ಸೂರಿನಲ್ಲಿ ಜ್ಞಾನ ಭಂಡಾರದ ಎಲ್ಲ ವ್ಯವಸ್ಥೆ ಸಹಕಾರಿಯಾಯಿತೆಂದು ಜಯಶ್ರೀ ತಿಳಿಸಿದರು.