ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ತಾಲೂಕಿನ ಕಡತೋಕಾ ಗ್ರಾಮದ ವಿದ್ಯಾರ್ಥಿ ಕುಮಾರ ವಿಶ್ವೇಶ್ವರ ಶಾನಭಾಗ ರಾಷ್ಟ್ರಮಟ್ಟದ ಸಂಸ್ಕೃತ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾರೆ.

ಈ ಸಾಧನೆಯ ಮೂಲಕ ಗ್ರಾಮೀಣ ಭಾಗದ ಪ್ರತಿಭೆಯೂ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಮೆರೆದಿರುವುದು ವಿಶೇಷವಾಗಿದ್ದು, ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕೃತ ಭಾಷೆಗೆ ಮತ್ತಷ್ಟು ಮೆರಗು ತಂದಿದ್ದಾರೆ.
ರಾಷ್ಟ್ರಮಟ್ಟದ ಸಂಸ್ಕೃತ ಒಲಿಂಪಿಯಾಡ್ ಪರೀಕ್ಷೆ ದೇಶದಾದ್ಯಂತದ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು, ಸಂಸ್ಕೃತ ವ್ಯಾಕರಣ, ಸಾಹಿತ್ಯ ಹಾಗೂ ಇಂಡಿಯನ್ ನಾಲೆಜ್ ಸಿಸ್ಟಮ್‌ಗಳು(IKS) ಕುರಿತು ವಿದ್ಯಾರ್ಥಿಗಳ ಪ್ರಾವೀಣ್ಯತೆಯನ್ನು ಅಳೆಯಲು ರೂಪಿಸಲಾಗಿದೆ.

ಈ ಪರೀಕ್ಷೆಯಲ್ಲಿ ಭಾಗವಹಿಸಿದ ಸಾವಿರಾರು ವಿದ್ಯಾರ್ಥಿಗಳ ನಡುವೆ ಕುಮಾರ ವಿಶ್ವೇಶ್ವರ ಶಾನಭಾಗ ಅವರು ಶ್ರೇಷ್ಠ ಸಾಧನೆ ತೋರಿರುವುದು ಹೆಮ್ಮೆಯ ವಿಷಯವಾಗಿದೆ.
ಈ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ವ್ಯಕ್ತಪಡಿಸಿದ್ದು, ಅವರ ಮುಂದಿನ ವಿದ್ಯಾಭ್ಯಾಸಕ್ಕೂ ಇದೇ ರೀತಿ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.