ಸುದ್ದಿ ಕನ್ನಡ ವಾರ್ತೆ

ಹುಬ್ಬಳ್ಳಿ: ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ಟೂರ್ನಿಯ ಪೈನಲ್ ಪಂದ್ಯದ ಕರ್ನಾಟಕದ ವಿರುದ್ಧ ಐದು ದಿನಗಳ ರೋಚಕ ಹೋರಾಟಕ್ಕೆ ತೆರೆಬಿದ್ದು ರಣಜಿ ಟ್ರೋಫಿ ಫೈನಲ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ, ಮೊದಲ ಇನ್ನಿಂಗ್ನಲ್ಲಿ ಗಳಿಸಿದ 291 ರನ್ ಗಳ ಭಾರೀ ಮುನ್ನಡೆಯ ಆಧಾರದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ದೇಶೀಯ ಕ್ರಿಕೆಟ್ ನ ಚಾಂಪಿಯನ್ ಪಟ್ಟಕ್ಕೇರಿತು. ಆ ಮೂಲಕ ತನ್ನ ಮುಕುಟಕ್ಕೆ ಚೊಚ್ಚಲ ರಣಜಿ ಟ್ರೋಫಿ ಕಿರೀಟ ಏರಿಸಿಕೊಂಡಿದೆ.

ರಣಜಿ ನಿಯಮದ ಪ್ರಕಾರ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಪಡೆದ ತಂಡಕ್ಕೆ ಡ್ರಾದಲ್ಲಿಯೂ ಪ್ರಶಸ್ತಿ ಲಭಿಸುವುದರಿಂದ, ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ರಣಜಿ ಟ್ರೋಫಿ ಗೆಲುವನ್ನು ಸಂಭ್ರಮಿಸಿತು. ಆಟಗಾರರು ಮೈದಾನದಲ್ಲೇ ಸಂಭ್ರಮಾಚರಣೆ ನಡೆಸಿದರು. ಡಗೌಟ್ ನಲ್ಲಿದ್ದ ಸದಸ್ಯರು ನಿಂತು ಅಭಿನಂದನೆ ಸಲ್ಲಿಸಿದರು. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಇತಿಹಾಸದಲ್ಲಿ ಇದು ಸುವರ್ಣ ಅಧ್ಯಾಯವಾಗಿ ದಾಖಲಾಯಿತು. ಕರ್ನಾಟಕ ವಿರುದ್ಧ ನಡೆದ ಈ ಐತಿಹಾಸಿಕ ಫೈನಲ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್ ನಿಂದಲೇ ಪ್ರಾಬಲ್ಯ ಸಾಧಿಸಿತು.

ಐದನೇ ದಿನದ ಆರಂಭದಲ್ಲಿ ಕಮ್ರಾನ್ ಇಟ್ಬಾಲ್ ಮತ್ತು ಸಾಹಿಲ್ ಲೋತ್ರಾ ಶಾಂತ ಹಾಗೂ ರಕ್ಷಣಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಅವಧಿಯಲ್ಲಿ ಇಬ್ಬರೂ ಕರ್ನಾಟಕ ಬೌಲರ್ ಗಳನ್ನು ಸುಲಭವಾಗಿ ಎದುರಿಸಿ ರನ್ ಪೇರಿಸಿದರು. ಫೈನಲ್ ನ ಪ್ರಮುಖ ಆಕರ್ಷಣೆಯಾಗಿ ಕಮ್ರಾನ್ ಇಟ್ಬಾಲ್ ಶತಕ ಸಿಡಿಸಿ ತಂಡಕ್ಕೆ ಭದ್ರತೆಯನ್ನು ಒದಗಿಸಿದರು.

ಸಾಹಿಲ್ ಲೋತ್ರಾ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ನ ಮೊದಲ ಶತಕ ದಾಖಲಿಸಿ ಸಾಧನೆಗೆ ಮತ್ತಷ್ಟು ಹೊಳಪು ನೀಡಿದರು. ಪಂದ್ಯ ಕರ್ನಾಟಕದ ಹಿಡಿತದಿಂದ ಸಂಪೂರ್ಣ ದೂರವಾದಂತಾಗುತ್ತಿದ್ದಂತೆ, ಉಭಯ ತಂಡಗಳು ಕೈಕುಲುಕಿ ಡ್ರಾಗೆ ಒಪ್ಪಿಕೊಂಡವು.