ಸುದ್ದಿ ಕನ್ನಡ ವಾರ್ತೆ

ಬೈಲಹೊಂಗಲ : ಸಮೀಪದ ಮರಕುಂಬಿ ಗ್ರಾಮದ ಹತ್ತಿರ ಇರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ಹಾಲು ಕುದಿಯುವ ಎವಿಸಿಪಿ ನಂ-1 ರ ಕರ್ಫಾಟಮೆಂಟ್ ವಾಲ ದುರಸ್ತಿ ಕೆಲಸ‌ ಮಾಡುವಾಗ ಆಕಸ್ಮಿಕವಾಗಿ ವಾಲನಿಂದ ಬಿಸಿ ಪದಾರ್ಥ ಸೋರಿಕೆಯಾದ ಪರಿಣಾಮ 3 ಜನ ಕಾರ್ಮಿಕರು ಸಾವನ್ನಪ್ಪಿದ್ದು, ಉಳಿದ 5 ಜನರು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಮಧ್ಹಾಹ್ನ ನಡೆದಿದೆ.

40 ಅಡಿ ಎತ್ತರದಲ್ಲಿರುವ ಎವಿಸಿಪಿ ನಂ-1 ರ ಕರ್ಫಾಟಮೆಂಟ್ ವಾಲ ದುರಸ್ತಿ ಕಾರ್ಯ ನಡೆದಿತ್ತು. ಈ ಕಾರ್ಯ ಕೈಗೊಳ್ಳುವ ಮುನ್ನ ಎವಿಸಿಪಿ ನಂ-1ನ್ನು ಬಂದ್ ಮಾಡಲಾಗಿತ್ತು ಎಂದು ಅಲ್ಲಿಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದರು. ಆದರೆ ವಾಲ್ ನ ನಟ್ ಬೋಲ್ಟ್ ತೆಗೆದು ದುರಸ್ತಿ ಮಾಡುವಾಗ ಏಕಾಏಕಿ ಬಿಸಿ ಪದಾರ್ಥ ಕಾರ್ಮಿಕರ ಮೈಮೇಲೆ ಬಿದ್ದಿದೆ. ಇದು ಹೇಗೆ ಬಿತ್ತು ಎನ್ನುವುದು ಪರಿಶೀಲನೆ ನಡೆಸಲಾಗುತ್ತಿದೆ.

ಬಿಸಿ ಪದಾರ್ಥ ಕಾರ್ಮಿಕರ ಮೇಲೆ ಬಿದ್ದು, ಸಂಪೂರ್ಣವಾಗಿ ಕಾರ್ಮಿಕರ ದೇಹ ಸುಟ್ಟಿರುವ ಪರಿಣಾಮ ಕಾರ್ಮಿಕರು ಒದಾಡಿ, ಕಿರಚಾಡಲು ತೊಡಗಿದ್ದಾರೆ. ತಕ್ಷಣ ಅಲ್ಲಿದ್ದ ಕಾರ್ಮಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಂಬ್ಯುಲೆನ್ಸ್ ತರೆಸುವ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅದರಲ್ಲಿ ಮೂವರು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಉಳಿದ 5 ಜನ ಕಾರ್ಮಿಕರು ಗಂಭೀರ ಗಾಯಗೊಂಡು ನರಳಾಡುತ್ತಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿದು ಬಂದಿತ್ತು.

ಎವಿಸಿಪಿ ನಂ-1 ರ ಕರ್ಫಾಟಮೆಂಟ್ ವಾಲ ದುರಸ್ತಿ ಕಾರ್ಯ ಮಾಡಲು ಹೋಗಿದ್ದ
ಜಮಖಂಡಿಯ ಅಕ್ಷಯ್ ಚೋಪಡೆ (45), ನೇಸರಗಿಯ ದೀಪಕ ಮುನವಳ್ಳಿ (31), ಖಾನಾಪೂರ ತಾಲೂಕಿನ ಚಿಕ್ಕಮುನವಳ್ಳಿಯ ಸುದರ್ಶನ ಬನೋಶಿ (25) ಮೃತ ದುರ್ದೈವಿಗಳು. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತ್ ಬಸಪ್ಪ ಸಾರವಾಡಿ (27), ಗೋಕಾಕದ ರಾಘವೇಂದ್ರ ಗಿರಿಯಾಳ (35), ಅಥಣಿಯ ಮಂಜು ತೇರದಾಳ (35), ಬೈಲಹೊಂಗಲ ಅರವಳ್ಳಿಯ ಮಂಜು ಕಾಜಗಾರ (28), ಬಾಗಲಕೋಟೆ ಮರೆಗುದ್ದಿಯ ಗುರು ತಮ್ಮಣ್ಣವರ ಗಾಯಾಳುಗಳು ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಪಿಐ ಐ.ಎಮ್.ಮಠಪತಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪ್ರಕರಣ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.