ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ತಾಲೂಕಿನ ಬಿಳಗಿ ಗ್ರಾಮ
ಪಂಚಾಯತ ವ್ಯಾಪ್ತಿಯ ಕಳೂರಿನಲ್ಲಿ ಬುಧವಾರ ಬೆಳಿಗ್ಗೆ ಬೀಸಿದ ಭಾರೀ ಗಾಳಿಯಿಂದ ಗೌರಿ ಲಕ್ಷ್ಮಣ ನಾಯ್ಕ ಎನ್ನುವವರ ವಾಸ್ತವದ ಮನೆ ಮೇಲೆ ತೆಂಗಿನ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ.

ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಬಿದ್ದು ಹೆಂಚುಗಳು ಒಡೆದು ಛಾವಣೆ ಕುಸಿದು ಬಿದ್ದು ಇಡೀ ಮನೆ ಸಂಪೂರ್ಣ ನೆಲಸಮವಾಗಿದೆ. ಮನೆಯಲ್ಲಿ ಮಲಗಿದ್ದ ಅಜ್ಜನು ಅಪಾಯದಿಂದ ಪಾರಾಗಿದ್ದಾನೆ. ಘಟನೆಯಲ್ಲಿ ಅದ್ರಷ್ಟವಶಾತ್ ಯಾವುದೇ ಗಾಯ ನೋವುಗಳು ಸಂಭವಹಿಸಿಲ್ಲ. ಗೌರಿ ನಾಯ್ಕ ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿದ್ದಾಳೆ. ನಾವು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮನೆಯವರಿಗೆ ಕೈ ಮುರಿದು ಕೆಲಸ ಮಾಡಲು ಆಗುತ್ತಿಲ್ಲ ನಮ್ಮ ಪರಿಸ್ಥಿತಿ ಕಷ್ಟದಲ್ಲಿದೆ. ಇತ್ತೀಚಿಗೆ ನಡೆದ ಜಾತ್ರೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಮಾಡಿಕೊಂಡಿದ್ದೇವೆ. ಸರಕಾರ ನಮಗೆ ಒಂದು ಹೊಸ ಮನೆ ಕೊಡಬೇಕು ಎಂದು ಮನೆ ಕಳೆದುಕೊಂಡ ಗೌರಿ ಲಕ್ಷಣ ನಾಯ್ಕ ಹೇಳಿದ್ದಾರೆ.

ಸ್ಥಳಕ್ಕೆ ತಹಶೀಲ್ದಾ‌ರ್ ಎಮ್ ಆರ್
ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷ ರಾಜು ನಾಯ್ಕ, ಮುಖಂಡ ವಿ ಎನ್ ನಾಯ್ಕ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.