ಸುದ್ದಿ ಕನ್ನಡ ವಾರ್ತೆ
ಶಿರಸಿ: ಮುಂಬರುವ ರಾಜ್ಯ ಪ್ರಸಿದ್ಧ ಶಿರಸಿ ಜಾತ್ರೆಗೆ ಸಂಬಂಧಿಸಿ ಬರುವ ಭಕ್ತಾದಿಗಳಿಗೆ ವಸತಿ, ಊಟ, ನೀರು ಒಳಗೊಂಡ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಹಾಗು ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರುಗಳಿಗೆ ಸೋಮವಾರ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮನವಿ ಸಲ್ಲಿಸಿದರು.
ಅವರು ನಗರದ ಮಿನಿ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಅವರು ಪಾಲ್ಗೊಂಡು ಮನವಿ ನೀಡಿದರು. ಜಾತ್ರೆಗೆ ಬರುವ ಭಕ್ತಾದಿಗಳಿಗೆ, ವ್ಯಾಪಾರಸ್ಥರಿಗೆ ವಸತಿ, ಊಟ, ಪಾರ್ಕಿಂಗ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಂತೆ ಈಗಾಗಲೇ ಶಾಸಕರಿಗೆ, ತಾಲೂಕು ಆಡಳಿತಕ್ಕೆ ಆಗ್ರಹಿಸಲಾಗಿದ್ದು, ಒಂದು ವೇಳೆ ನಿಗಧಿತ ಸಮಯದಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ತಾಲೂಕು ಆಡಳಿತ ವಿಫಲವಾದರೆ, ಫೆ.3 ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ, ಹೇಳಿಕೆ ನೀಡಲಾಗಿತ್ತು. ಆದರೆ ಇಂದು ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಾತ್ರಾ ಆರಂಭವಾಗುವುದರೊಳಗೆ ವ್ಯಾಪಾರಿಗಳು, ಭಕ್ತಾದಿಗಳನ್ನು ಒಳಗೊಂಡು ಸರ್ವರಿಗೂ ಅನುಕೂಲವಾಗುವಂತೆ ಎಲ್ಲ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಸಚಿವರ ಮಾತಿನ ಮೇಲೆ ವಿಶ್ವಾಸವಿರಿಸಿ, ಫೆ.3 ರಂದು ಘೋಷಿಸಿದ್ದ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದು, ಜಾತ್ರೆ ಆರಂಭವಾಗುವ ನಾಕೈದು ದಿನದವರೆಗೆ ಆಡಳಿತ ಇಲಾಖೆಗಳ ವ್ಯವಸ್ಥೆಯ ಕೆಲಸವನ್ನು ಗಮನಿಸಿ, ಸತ್ಯಾಗ್ರಹದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
