ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳ ಕಾಲ ಮೋಡ, ಸೆಕೆಯ ವಾತಾವರಣದ ನಂತರ, ನಂದಿಗದ್ದೆ ಪ್ರದೇಶದಲ್ಲಿ ಇಂದು ಗುಡುಗು, ಮಿಂಚು ಹಾಗೂ ಆಲಿಕಲ್ಲುಗಳೊಂದಿಗೆ ಭರ್ಜರಿಯಾದ ಮಳೆ ಸುರಿದು ಜನರಲ್ಲಿ ಸಂತಸ ಮೂಡಿಸಿದೆ.

ಮಳೆಯ ಆರಂಭಕ್ಕೂ ಮೊದಲು ಆಕಾಶದಲ್ಲಿ ಕಪ್ಪುಮೋಡಗಳು ಆವರಿಸಿ, ಗಾಳಿಯ ವೇಗ ಹೆಚ್ಚಾಗಿ, ನಂತರ ಗುಡುಗು-ಮಿಂಚಿನ ಸದ್ದುಗಳ ನಡುವೆ ಆಲಿಕಲ್ಲುಗಳು ಸುರಿದವು. ಕೆಲವೇ ಕ್ಷಣಗಳಲ್ಲಿ ಪ್ರದೇಶವು ತಂಪಾದ ವಾತಾವರಣಕ್ಕೆ ತಿರುಗಿತು.

ರಸ್ತೆಗಳು, ಹಾಗೂ ಹೊಲಗಳು,ತೋಟಗಳು ಮಳೆಯ ನೀರಿನಿಂದ ತೇವಗೊಂಡಿದ್ದು, ರೈತರಿಗೆ ಈ ಮಳೆ ತಂಪಾದ ವಾತಾವರಣವಾಗಿ ಪರಿಣಮಿಸಿದೆ. ದೀರ್ಘ ಕಾಲದ ಬಳಿಕ ಬಂದ ಈ ಮಳೆ ಬೆಳೆಗಳಿಗೆ ಉಪಯುಕ್ತವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಆಲಿಕಲ್ಲು ಮಳೆಯಿಂದ ಕೆಲವೆಡೆ ಸಣ್ಣ ಪ್ರಮಾಣದ ಹಾನಿ ಸಂಭವಿಸಿದರೂ, ಒಟ್ಟಾರೆ ಮಳೆಯು ಪ್ರದೇಶದ ಜನರಿಗೆ ಹರ್ಷವನ್ನು ತಂದಿದೆ.
ಒಂದು ತಿಂಗಳ ಬಳಿಕ ಒಂದು ಗಂಟೆಗೂ ಹೆಚ್ಚು ಸುರಿದ ಈ ಮಳೆ, ಬಿಸಿಲಿನ ತಾಪದಿಂದ ಬೇಸತ್ತುಕೊಂಡಿದ್ದ ಜನರಿಗೆ ತಂಪಿನ ಅನುಭವವನ್ನು ನೀಡಿದ್ದು, ಪ್ರಕೃತಿಯ ಸೌಂದರ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಬಿಸಿಲಿನ ಧಗೆಯಿಂದ ಕಾಡ್ಗಿಚ್ಚಿನ ಭಯದ ವಾತಾವರಣದಿಂದಿದ್ದ ಅರಣ್ಯ ಇಲಾಖೆಯವರು ಭರ್ಜರಿಯಾದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.