ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಸುತ್ತಮುತ್ತ ಕಾಡಾನೆ ಓಡಾಟ ಮುಂದುವರಿದಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಮು೦ದುವರಿದಿದೆ.
ಕಳೆದ ಎರಡು ತಿಂಗಳುಗಳಿಂದ ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿದೆಡೆ ಕೃಷಿ ಭೂಮಿಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ. ಹಳಿಯಾಳ ರಸ್ತೆಯಲ್ಲಿ ಒಂಟಿ ಸಲಗವೊಂದು ಆಗಾಗ ವಾಹನಗಳನ್ನು ಅಡ್ಡಗಟ್ಟಿ ಸವಾರರನ್ನು ಭಯಗೊಳಿಸುವುದು ನಡೆದಿದೆ. ಇಷ್ಟು ದಿವಸಗಳ ಕಾಲ ಕೇವಲ ಒಂದೇ ಕಾಡಾನೆ ಓಡಾಡುತ್ತಿತ್ತು. ಈಗ ಅದರ ಜತೆ ಮರಿ ಆನೆಯೊಂದು ಸೇರ್ಪಡೆಯಾಗಿದೆ. ಸೋಮವಾರ ಬೆಳಗ್ಗೆ ಕಾಡಾನೆ ಹಾಗೂ ಅದರ ಮರಿ ಯಲ್ಲಾಪುರ-ಹಳಿಯಾಳ ಗಡಿಭಾಗದ ಡೌಗಿನಾಲಾ ಬಳಿ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.
ಯಲ್ಲಾಪುರ-ಹಳಿಯಾಳ ವಾಹನ ಸವಾರರು, ಕಣ್ಣಿಗೇರಿ ಸುತ್ತಮುತ್ತಲಿನ ಗ್ರಾಮಸ್ಥರು ಭಯದ ವಾತಾವರಣದಲ್ಲೇ ಓಡಾಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಆದಷ್ಟು ಶೀಘ್ರ ಕಾಡಾನೆ ಓಡಾಟದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
