ಸುದ್ದಿ ಕನ್ನಡ ವಾರ್ತೆ

ದಾಂಡೇಲಿ:ತಾಲೂಕಿನ ಆಲೂರು ಗ್ರಾಮ ಪಂಚಾಯತ ವ್ಯಾಪ್ತಿಯ ಆಲೂರ ಗ್ರಾಮದ ಪುಂಡಲೀಕ ಜಾಧವ ಅವರ ದನದ ಕೊಟ್ಟಿಗೆಗೆ ಕಾಡಾನೆಯೊಂದು ದಾಳಿ ಮಾಡಿ ಕೊಟ್ಟಿಗೆ ಧ್ವಂಸಗೊಳಿಸಿದ ಘಟನೆ ನಸುಕಿನ ಜಾವ ನಡೆದಿದೆ.

ನಸುಕಿನ ಜಾವ ಕಾಡಾನೆಯು ಕೊಟ್ಟಿಗೆಯನ್ನು ದ್ವಂಸ ಮಾಡಿದ ಕಾರಣ,ಕೊಟ್ಟಿಗೆಯಲ್ಲಿದ್ದ ಎಮ್ಮೆ,ಕರುಗಳು ಗಾಯಗೊಂಡವು.ನಂತರ ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ರೈತರ ಜೀವನೋಪಾಯದ ಭಾಗವಾದ ಪಶು ಸಂಗೋಪನೆ,ಬೆಳೆಯುವ ಬೆಳೆಗಳಿಗೆ ಹಾನಿ ಮಾಡುವುದರಿಂದ ಜೀವನಾಧಾರಕ್ಕೆ ತೊಂದರೆಯಾಗುತ್ತದೆ. ಕಾಡಾನೆಯು ಕೊಟ್ಟಿಗೆಯನ್ನು ದ್ವಂಸಗೊಳಿಸಿ ಹಾನಿ ಮಾಡಿದ್ದು, ರಾತ್ರಿಯ ಸಮಯದಲ್ಲಿ ರೈತರು ಹೊರಬರಲು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಂಬಂಧ ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅರಣ್ಯ ಇಲಾಖೆಯವರು ರೈತರ ಜಮೀನು,ಜಾನುವಾರಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಗ್ರಾಮದ ರೈತರಿಗೆ ಮುಂದಿನ ದಿನಗಳಲ್ಲಿ ಹಾನಿ ಆಗದೇ ರೀತಿಯಲ್ಲಿ ರಕ್ಷಣಾ ಕ್ರಮಗಳ ಬಗ್ಗೆ ತ್ವರಿತ ಕ್ರಮವಾಗಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.