ಸುದ್ದಿ ಕನ್ನಡ ವಾರ್ತೆ

ಶಿರಸಿ:ನಗರದ, ದಕ್ಷಿಣ ಭಾರತದ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ಮಹಾರಥೋತ್ಸವಕ್ಕೆ ಬುಧವಾರ ಭಾರೀ ಸಂಭ್ರಮದ ನಡುವೆ ಚಾಲನೆ ನೀಡಲಾಯಿತು. ಲಕ್ಷಾಂತರ ಭಕ್ತರ “ಜೈ ಮಾರಿಕಾಂಬಾ” ಘೋಷಣೆಗಳ ನಡುವೆ ಸರ್ವಾಲಂಕಾರ ಭೂಷಿತಳಾದ ದೇವಿ ರಥಾರೂಢಳಾಗಿ ದರ್ಶನ ನೀಡಿದಳು.

ಬೆಳಿಗ್ಗೆ 7 ಗಂಟೆಯಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ, 7:28ಕ್ಕೆ ದೇವಿಯನ್ನು ರಥಾರೂಢಳನ್ನಾಗಿ ಮಾಡಲಾಯಿತು. 9:07ಕ್ಕೆ ಅಧಿಕೃತವಾಗಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ಮಾರಿಗುಡಿ ಬೀದಿಗಳಲ್ಲಿ ರಥ ಸಾಗುತ್ತಿದ್ದಂತೆ ವಾದ್ಯ, ಡೊಳ್ಳುಕುಣಿತ, ಚಂಡೆ ನಾದಗಳೊಂದಿಗೆ ಶೋಭಾಯಾತ್ರೆ ಕಳೆಗಟ್ಟಿತು. ಹರಕೆ ಹೊತ್ತ ಭಕ್ತರು ಬಾಳೆಹಣ್ಣು, ಕಡಲೆ, ಅಕ್ಕಿ ಇತ್ಯಾದಿಗಳನ್ನು ಅರ್ಪಿಸಿದರು.

ರಥೋತ್ಸವದ ನಂತರ ದೇವಿ ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಆಸೀನಳಾಗಿದ್ದಾಳೆ. ಫೆಬ್ರವರಿ 26ರಿಂದ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶವಿದ್ದು, ಜಾತ್ರೆ ಮಾರ್ಚ್ 4ರವರೆಗೆ ನಡೆಯಲಿದೆ. ಭಕ್ತರ ಸುರಕ್ಷತೆಗಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.