ಸುದ್ದಿ ಕನ್ನಡ ವಾರ್ತೆ
ಬೆಂಗಳೂರು:ಸಭಾಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಮತ್ತು ದುಂದುವೆಚ್ಚ – ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆಯಾಗಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ವಿಧಾನಸಭೆಯ ಆಡಳಿತವು ಆಡಳಿತಾತ್ಮಕ ಸುಧಾರಣೆ ಹೆಸರಿನಲ್ಲಿ ಭಾರೀ ಅವ್ಯವಹಾರಗಳನ್ನು ನಡೆಸಿದೆ ಎಂಬ ಸಂಶಯಗಳು ಮತ್ತು ಗಂಭೀರ ಆರೋಪಗಳು ಕೇಳಿಬಂದಿವೆ. ಸದನದ ಹಿರಿಮೆ ಗರಿಮೆಯನ್ನು ಕಾಪಾಡಬೇಕಾದ ಸಭಾಧ್ಯಕ್ಷರ ಕಚೇರಿಯೇ ಇಂದು ಭ್ರಷ್ಟಾಚಾರದ ಆರೋಪಗಳ ಮಸೀಮೆತ್ತಿಕೊಂಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಭಾಧ್ಯಕ್ಷ ಸ್ಥಾನದ ಗೌರವಕ್ಕೂ ತೀವ್ರ ಧಕ್ಕೆಯುಂಟು ಮಾಡಿದೆ.
ವಿಧಾನಸೌಧಕ್ಕೆ ವಿದ್ಯುತ್ ಅಲಂಕಾರ, ಶಾಸಕರ ಭವನಕ್ಕೆ ಹಾಸಿಗೆ-ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶ ಅಧ್ಯಯನ ಪ್ರವಾಸ, ಮತ್ತು ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಮಾಡಿದ ಅಪಕೀರ್ತಿ ಹಾಗೂ ಉಚಿತ ಊಟ ತಿಂಡಿ ಸರಬರಾಜು ಮಾಡಿದ್ದು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ಸಂಶಯವಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮರದ ಬಾಗಿಲು ಮತ್ತು ಅನಗತ್ಯವಾದ ನೆಲಹಾಸು ಅಳವಡಿಕೆ, ವಿಧಾನಸೌಧದ ಆವರಣದಲ್ಲಿ ದುಂದುವೆಚ್ಚದ ಪುಸ್ತಕ ಮೇಳ, ವಿಧಾನಸಭೆಯ ಸಭಾಂಗಣದ ಒಳಗೆ ಎಐ ಕ್ಯಾಮೆರಾ ಅಳವಡಿಕೆ ಮತ್ತು ಹೊಸದಾಗಿ ಟಿವಿಗಳ ಅಳವಡಿಕೆಗಾಗಿ ಬೇಕಾಬಿಟ್ಟಿ ಖರೀದಿ ಮಾಡಿರುವುದು ಆರೋಪಕ್ಕೆ ಗುರಿಯಾಗಿದೆ.
ಶಾಸಕರ ಭವನಕ್ಕೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್, ಸ್ಟೇನ್ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ಗಳ ಖರೀದಿಯಲ್ಲೂ ಸಹ ಮಾರುಕಟ್ಟೆ ದರಕ್ಕೂ ಮತ್ತು ಸಚಿವಾಲಯದ ದರಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ ಎಂದು ಹೇಳಲಾಗಿದ್ದು, ಈ ಎಲ್ಲಾ ಖರೀದಿಗಳ ಗುತ್ತಿಗೆಯನ್ನು ಅನುಮಾನಾಸ್ಪದವಾಗಿ ಮಂಗಳೂರು ಮೂಲದ ಕಂಪನಿಗಳಿಗೆ ನೀಡಲಾಗಿದೆ ಎಂಬ ಆರೋಪವಿದೆ.
ಯಾವುದೇ ವಸ್ತು ಖರೀದಿಸಲು ಹಣಕಾಸು ಇಲಾಖೆಯ ಅನುಮತಿ ಮತ್ತು ಟೆಂಡರ್ ಸೇರಿದಂತೆ ಹಲವು ನಿಯಮಗಳು ಪಾಲನೆಯಾಗಬೇಕು. ಆದರೆ, ಇಲ್ಲಿ ಹಲವು ವಸ್ತುಗಳ ಖರೀದಿಗೆ ಯಾವುದೇ ನಿಯಮ ಪಾಲನೆಯಾಗಿಲ್ಲ. ಹಣಕಾಸು ಇಲಾಖೆ ಅನುಮತಿ ನೀಡದಿದ್ದರೂ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ, ಎಲ್ಲಾ ವಸ್ತುಗಳಿಗೂ ಎರಡು-ಮೂರು ಪಟ್ಟು ಹೆಚ್ಚು ಖರ್ಚು ತೋರಿಸಿ ಹಣಕಾಸು ಇಲಾಖೆಯು ಅನುಮತಿ ನೀಡದಿದ್ದರು ಮುಖ್ಯಮಂತ್ರಿಗಳ ಮೌಖಿಕ ಒತ್ತಡದಿಂದ ಹಣಕಾಸು ಇಲಾಖೆ ತುರ್ತಾಗಿ ಮಾಡಬೇಕಾದ ಕೆಲಸವೆಂದು 4ಜಿ ವಿನಾಯಿತಿ ನೀಡಿರುವುದು ಸಂಶಯಕ್ಕೆ ಎಡೆ ಮಾಡಿದೆ. ಇದರ ಜೊತೆಗೆ, ಬಿಜೆಪಿ ಶಾಸಕರನ್ನು ದುರ್ಬಲ ಕಾರಣಗಳಿಗಾಗಿ ಎರಡು ಬಾರಿ ಅಮಾನತುಗೊಳಿಸಿರುವ ಸಭಾಧ್ಯಕ್ಷರ ಪಕ್ಷಪಾತಿ ನಿರ್ಣಯವೂ ಸಹ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಭಿವೃದ್ಧಿಗೆ ಹಣವಿಲ್ಲದ ಈ ಸಂದರ್ಭದಲ್ಲಿ ಇಷ್ಟೊಂದು ದುಂದುವೆಚ್ಚ ಮಾಡುವ ಅವಶ್ಯಕತೆ ಇರಲಿಲ್ಲ. ಈ ಕಾಂಗ್ರೆಸ್ ಸರ್ಕಾರಕ್ಕೆ ಹಗರಣ ಮಾಡಲು ಇರುವಷ್ಟು ತರಾತುರಿ ಅಭಿವೃದ್ಧಿ ಕಾರ್ಯಗಳಲ್ಲಿ ಕಂಡುಬರುತ್ತಿಲ್ಲ. ಆದ್ದರಿಂದ, ಈ ಎಲ್ಲಾ ಗಂಭೀರ ಆರೋಪಗಳ ಕುರಿತು ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾಲಮಿತಿಯಲ್ಲಿ ತನಿಖೆಯಾಗಬೇಕು ಮತ್ತು ಸಭಾಧ್ಯಕ್ಷರ ಕಚೇರಿಯ ಕಾರ್ಯ ಚಟುವಟಿಕೆಗಳು ಸಾರ್ವಜನಿಕ ಪಾರದರ್ಶಕತೆಗಾಗಿ ಮಾಹಿತಿ ಹಕ್ಕು ಕಾಯಿದೆ (RTI) ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯಿಸಿ,
ಸಭಾದ್ಯಕ್ಷರ ಪೀಠ ಗೌರವ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿ ವರದಿ ಪಡೆದು ಆರೋಪ ಮುಕ್ತವಾಗಬೇಕೆಂದು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
