ಸುದ್ದಿ ಕನ್ನಡ ವಾರ್ತೆ
. ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ ಕೇಂದ್ರ ಸರ್ಕಾರವು ಬೆಲೆ ಏರಿಕೆಯ ಆತಂಕದಲ್ಲಿದ್ದ ದೇಶದ ಜನತೆಗೆ ದೊಡ್ಡ ರಿಲೀಫ್ ನೀಡಿದೆ. ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ತಲಾ 10 ರೂಪಾಯಿಗಳಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ, ಪೆಟ್ರೋಲ್ ಮೇಲಿನ ಸುಂಕ ಲೀಟರ್ಗೆ 3 ರೂಪಾಯಿಗೆ ಇಳಿಕೆಯಾಗಿದ್ದರೆ, ಡೀಸೆಲ್ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ. ಈವರೆಗೆ ಪೆಟ್ರೋಲ್ಗೆ 13 ರೂ. ಹಾಗೂ ಡೀಸೆಲ್ಗೆ 10 ರೂ.ಅಬಕಾರಿ ಸುಂಕ ಇತ್ತು. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿಧಿಸಿರುವ ದಿಗ್ಧಂಧನದಿಂದಾಗಿ ವಿಶ್ವದಾದ್ಯಂತ ಇಂಧನ ಬಿಕ್ಕಟ್ಟು ತಲೆದೋರಿದೆ. ಜಗತ್ತಿನ ಒಟ್ಟು ತೈಲ ಪೂರೈಕೆಯ ಶೇ. 20 ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುತ್ತದೆ. ಭಾರತವು ಕೂಡ ತನ್ನ ಒಟ್ಟು ಆಮದಿನ ಶೇ. 12-15 ರಷ್ಟು ತೈಲವನ್ನು ಇದೇ ಮಾರ್ಗದಿಂದ ಪಡೆಯುತ್ತಿತ್ತು. ಈ ಬಿಕ್ಕಟ್ಟಿನ ಸಮಯದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತಿನ ಮೇಲೆ ಈ ಹಿಂದೆ ನೀಡಲಾಗುತ್ತಿದ್ದ ವ್ಯಾಪಕ ತೆರಿಗೆ ವಿನಾಯಿತಿಗಳನ್ನು ಸರ್ಕಾರ ಹಿಂಪಡೆದಿದೆ.
ರಫ್ತು ನಿಯಮ ಕಠಿಣಗೊಳಿಸಿದರೂ, ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಸಾರ್ವಜನಿಕ ವಲಯದ ತೈಲ ಕಂಪನಿಗಳು ಮಾಡುವ ಪೂರೈಕೆಗೆ ರಿಯಾಯಿತಿ ಮುಂದುವರಿಯಲಿದೆ.
ಹಾಗೂ ಈಗಾಗಲೇ ಅನುಮೋದನೆಗೊಂಡಿರುವ ರಫ್ತು ಆರ್ಡ್ರಗಳಿಗೆ ಹೊಸ ನಿಯಮಗಳು ಅನ್ವಯಿಸುವುದಿಲ್ಲ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇರುವ ಈ ಸಮಯದಲ್ಲಿ, ದೇಶದೊಳಗೆ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಬೆಲೆ ಏರಿಕೆಯನ್ನು ತಡೆಯುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಈ ಹೊಸ ಸುಂಕ ವ್ಯವಸ್ಥೆಯು ಗ್ರಾಹಕರಿಗೆ ಲಾಭ ತರುವುದಲ್ಲದೆ, ತೈಲ ಮಾರಾಟ ಕಂಪನಿಗಳ ಮೇಲಿನ ಆರ್ಥಿಕ ಒತ್ತಡವನ್ನೂ ಕಡಿಮೆ ಮಾಡಲಿದೆ.
