ಸುದ್ದಿ ಕನ್ನಡ ವಾರ್ತೆ
ಸತ್ತಿಗೇರಿ : ಮನುಷ್ಯ ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಉಗಮ ವಿಕಾಸಕ್ಕೆ ಶುದ್ಧ ಗಾಳಿ, ನೀರು ಹಾಗೂ ಭೂಮಿಯು ಅಗತ್ಯವಾಗಿದ್ದು ಹೆಸರಿನಲ್ಲಿ ನಡೆಯುತ್ತಿರುವ ಹಲವು ಉಪಕ್ರಮಗಳಿಂದ ಪರಿಸರ ನಾಶ ದಿನೇ ದಿನೇ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಯರಗಟ್ಟಿಯ ಸರ್ಕಾರಿ ಪ್ರಥಮ ದರ್ಶ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ವಿದ್ಯಾರ್ಥಿಗಳು ದೈನಂದಿನ ವ್ಯಾಸಂಗದ ಜೊತೆಗೆ ಪರಿಸರ ರಕ್ಷಣೆಗೆ ಅಗತ್ಯವಾದ ಸಕಾರಾತ್ಮಕ ಮನೋಭಾವ ಹಾಗೂ ವರ್ತನೆಗಳನ್ನು ರೂಢಿಸಿಕೊಳ್ಳಬೇಕು. ಸ್ಪೀಡನ್ ದೇಶದ ಗ್ರೇಟಾ ಟೆನ್ಬರ್ಗ್ ಈ ವಿಷಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು ಅವಳಂತೆ ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು. ಹಬ್ಬ ಹರಿದಿನ ಜಾತ್ರೆ ಉತ್ಸವಗಳಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ರಾಸಾಯನಿಕ ಬಳಕೆಗಳನ್ನು ಇಲ್ಲವಾಗಿಸುವ ದೃಢಸಂಕಲ್ಪವನ್ನು ನಾವೆಲ್ಲರೂ ಹೊಂದಬೇಕು ಎಂದು ಪ್ರತಿಪಾದಿಸಿದರು.
ಶಾಲೆಯ ಮುಖ್ಯ ಗುರುಗಳಾದ ಎಸ್.ಬಿ. ತೋರಗಲ್ಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರಾದ ಬಿಎಮ್ ಭಾವ ಖಾನ್ ವಿಜಯಲಕ್ಷ್ಮಿ ಲಿಂಗದಲ್ಲಿ ಸೇರಿದಂತೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
