ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ -ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಬೈಲಹೊಂಗಲ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ನಡೆಯಿತು.
ಗ್ರಂಥ ಲೋಕಾರ್ಪಣೆ ಗೊಳಿಸಿದ ಬೈಲಹೊಂಗಲ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುತ್ತಪ್ಪ ತಾತೋಬಾ ಗಾಣಿಗೇರ ಅವರು ಮಾತನಾಡಿ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಬಸವಣ್ಣನವರ ಜನನ, ಕಪ್ಪಡಿ ಸಂಗಮದಲ್ಲಿ ಬಸವಣ್ಣನವರ ವಿದ್ಯಾಭ್ಯಾಸ, ಕಾಯಕ ಜೀವನ, ಕಲ್ಯಾಣದಲ್ಲಿ ಬಸವಣ್ಣನವರ ಸಾಧನೆಗಳು, ಬಸವ ಮಹಾಮನೆ, ಪ್ರಸಾದ- ದಾಸೋಹ, ಅನುಭವ ಮಂಟಪದ ಸ್ಥಾಪನೆ, ಬಸವ ಪೂರ್ವದ ಪರಿಸ್ಥಿತಿ ಹಾಗೂ ನಂತರದ ಸಾಮಾಜಿಕ, ಆರ್ಥಿಕ, ಸಾಹಿತ್ಯಕ, ಶೈಕ್ಷಣಿಕ ಪರಿಸ್ಥಿತಿ ವಿವರದೊಡನೆ ಬಸವಣ್ಣನವರ ಘನ ವ್ಯಕ್ತಿತ್ವ ಹಾಗೂ ಜೀವನದ ಘಟನೆಗಳನ್ನು ಒಳಗೊಂಡು ಜನರಿಗೆ ಒಳ್ಳೆಯ ಸಂದೇಶಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬ್ಯಾಂಕಿನ ಲೆಕ್ಕಾಧಿಕಾರಿ ಸತೀಶ ಶ್ರೀಧರ ಹನುಮಶೇಟ ಅವರು ಮಾತನಾಡಿ ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಮಹಾನ್ ಮಾನವತಾವಾದಿ, ಕಲ್ಯಾಣಕ್ಕಾಗಿ ಹಗಲಿಗಳು ಶ್ರಮಿಸಿದ ವಿಶ್ವದ ಯುಗಪುರುಷ ಬಸವಣ್ಣನವರು ಮಹಾ ಮಾನವತಾವಾದಿ, ಸ್ವತಂತ್ರ ವಿಚಾರವಾದಿ, ಸಮತಾವಾದಿ, ದಲಿತೋದ್ಧಾರಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸ್ತ್ರೀಕುಲೋದ್ಧಾರಕ, ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವದ ಮಹಾನ್ ದಾರ್ಶನಿಕರಾಗಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಇಂತಹ ಕಲ್ಪನೆ ಬಿತ್ತುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರು, ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಬಸವ ಸಮಿತಿಯು ಈಗಾಗಲೇ 50 ಭಾಷೆಗಳಲ್ಲಿ ವಚನಗಳನ್ನು ಭಾಷಾಂತರಿಸಿದೆ. ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ, ವಚನಕಾರರು ಮತ್ತು ವ್ಯಕ್ತಿತ್ವ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನವಾಗಿದೆ ಎಂದು ಹೇಳಿದರು.
ಬಸವ ಅಭಿಮಾನಿ ಪ್ರವೀಣ ನಾಗೇಶ ಕೊಪ್ಪದ ಸ್ವಾಗತಿಸಿದರು, ಮಹಾದೇವಸ್ವಾಮಿ ಪ್ರಾರ್ಥನೆ ಮಾಡಿದರು, ಸಹಾಯಕ ಲೆಕ್ಕಾಧಿಕಾರಿಗಳಾದ ಶ್ರೀಮತಿ ರೇಖಾ ಪ್ರಮೋದ ಮುಳುಗುಂದ ನಿರೂಪಿಸಿದರು, ಶ್ರೀಮತಿ ಭಾರತಿ ಗಂಗಾಧರ ಹಿರೇಮಠ ವಂದಿಸಿದರು.