ಸುದ್ದಿ ಕನ್ನಡ ವಾರ್ತೆ
Goa:ಸನಾತನ ರಾಷ್ಟ್ರದ ಸ್ಥಾಪನೆಗೆ ಸ್ಫೂರ್ತಿದಾಯಕವಾದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಗೋವಾ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಅತ್ಯಂತ ಉತ್ಸಾಹ, ಭಕ್ತಿ ಮತ್ತು ರಾಷ್ಟ್ರಪ್ರೇಮದಿಂದ ತುಂಬಿದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ 6 ದಿನಗಳ ಭವ್ಯ ಮಹೋತ್ಸವದಲ್ಲಿ 23 ದೇಶಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಸುಮಾರು 20000 ಧರ್ಮಪ್ರೇಮಿ ನಾಗರಿಕರು ಮತ್ತು ಸಾಧಕರು ಭಾಗವಹಿಸಿ ಏಕತೆಯನ್ನು ಪ್ರದರ್ಶಿಸಿದರು. “ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಿಜವಾದ ಅರ್ಥದಲ್ಲಿ ಶಂಖನಾದ ಮೊಳಗಿದೆ. ಧರ್ಮಾಭಿಮಾನ ಜಾಗೃತಗೊಂಡಿದೆ. ಈ ಮಹೋತ್ಸವವು ಇತಿಹಾಸವನ್ನು ನಿರ್ಮಿಸುವ ಕ್ಷಣವಾಗಿತ್ತು ಮತ್ತು ಸನಾತನ ರಾಷ್ಟ್ರ ಸ್ಥಾಪನೆಯ ದಿಕ್ಕಿನಲ್ಲಿ ಇಟ್ಟಿರುವ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ” ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಅವರು ಮಾಹಿತಿ ನೀಡಿದರು.
ಮಹೋತ್ಸವದಲ್ಲಿ ದೇಶದ ಅನೇಕ ಧರ್ಮಗುರುಗಳು, ರಾಷ್ಟ್ರನಿಷ್ಠ ನಾಯಕರು ಮತ್ತು ಚಿಂತಕರು ಮಾರ್ಗದರ್ಶನ ಮಾಡಿದರು. ಕರ್ನಾಟಕದ ಬೆಂಗಳೂರು ಸೇರಿದಂತೆ 5000ಕ್ಕೂ ಅಧಿಕ ಹಿಂದುತ್ವನಿಷ್ಠರು, ಗಣ್ಯರು, ಸಾಧಕರು ಉಪಸ್ಥಿತರಿದ್ದರು.
ಅಭೂತಪೂರ್ವ ಕ್ಷಣಗಳ ಅನಿಸಿಕೆಗಳನ್ನು ಹಂಚಿಕೊಂಡ ಹಿಂದೂ ನಾಯಕರು ಮತ್ತು ಗಣ್ಯರು :
ಶ್ರೀ. ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಮೈಸೂರು : ಭಾರತದ ಭವಿಷ್ಯವನ್ನು ಸನಾತನ ಧರ್ಮದ ರಕ್ಷಣೆಯ ಆಧಾರದ ಮೇಲೆ ರೂಪಿಸಬೇಕಾಗಿದೆ. ಶ್ರೇಷ್ಠ ಭಾರತವನ್ನು ಕಟ್ಟಲು ಮತ್ತು ಮುನ್ನಡೆಸಲು ಈ ಮಹೋತ್ಸವದಲ್ಲಿ ನಡೆಯುವ ಚರ್ಚೆ ಅತ್ಯಂತ ಅವಶ್ಯಕ. ನಮ್ಮ ನಿಜವಾದ ಶಕ್ತಿ ಆರ್ಥಿಕ ಅಥವಾ ಬಲಿಷ್ಠ ಸೇನೆಯಲ್ಲಿಲ್ಲ. ಭಾರತವು ಮೂಲತಃ ಸಾಂಸ್ಕೃತಿಕ ದೇಶ. ನಮ್ಮ ಮೂಲ ಧರ್ಮವೇ ಸನಾತನ ಧರ್ಮ. ಈ ಸಾಂಸ್ಕೃತಿಕ ಗುರುತನ್ನು ಎಲ್ಲರಲ್ಲೂ ನಿರ್ಮಿಸುವುದು ನಮ್ಮ ಗುರಿಯಾಗಿದೆ.
ಕರ್ನಾಟಕದ ‘ಯುವ ಬ್ರಿಗೇಡ್’ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ : ವಿಜೃಂಭಣೆಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಮೂಲೆ ಮೂಲೆಗಳಿಂದ ಹಿಂದೂ ನಾಯಕರನ್ನು ಒಂದೇ ಉದ್ದೇಶದಿಂದ ಸೇರಿಸಿದೆ – ಅದು ಸನಾತನ ರಾಷ್ಟ್ರ . ನಮ್ಮ ರಾಷ್ಟ್ರಕ್ಕೆ ಕವಿದಿರುವ ಮೋಡವನ್ನು ಸರಿಸಿ ಪುನಃ ಸನಾತನ ರಾಷ್ಟ್ರದ ನಿರ್ಮಿತಿಯ ಕಾರ್ಯ ಈ ಮಹೋತ್ಸವದ ಮೂಲಕ ನಡೆಯುತ್ತಿದೆ.
ಶ್ರೀ . ನಂದಕುಮಾರ್, ನಿಕಟಪೂರ್ವ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರಕಾರ :* ಗುರುಗಳು ಈ ಕಾರ್ಯಕ್ರಮದ ಉತ್ತಮ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ. ಬೃಹತ್ ಸಮ್ಮೇಳನದಲ್ಲಿ ಸಾಧನೆ ಮಾಡುವವರ ಎಲ್ಲರ ಮೇಲೆ ಗುರುಗಳ ಅಖಂಡ ಕೃಪೆ ಇದೆ. ನಾವೆಲ್ಲರೂ ಒಟ್ಟುಗೂಡಿ ಸನಾತನದ ಧರ್ಮದ ಪ್ರಚಾರ ಮಾಡಬೇಕಿದೆ.
ಶ್ರೀ. ಪುನೀತ್ ಕೆರೆಹಳ್ಳಿ, ಅಧ್ಯಕ್ಷರು, ರಾಷ್ಟ್ರ ರಕ್ಷಣಾ ಪಡೆ : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸಿದ್ದು ನಮ್ಮ ಜೀವನದ ಪುಣ್ಯ. ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ಹಿಂದೂ ರಾಷ್ಟ್ರದ ಕಹಳೆ ಊದುತ್ತಿರುವ ಸನಾತನ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಲ್ಲಿಂದ ತೆರಳಿ ನಾವೆಲ್ಲರೂ ಹಿಂದೂ ರಾಷ್ಟ್ರದ ಸಂಕಲ್ಪಕ್ಕೆ ಕೈಜೋಡಿಸೋಣ.
ನ್ಯಾಯವಾದಿ ಅರುಣ ಶ್ಯಾಮ್, ಕರ್ನಾಟಕ ಉಚ್ಚ ನ್ಯಾಯಾಲಯ :ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅರುಣ ಶ್ಯಾಮ್ ಅವರು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಸನಾತನ ಧರ್ಮದ ಇತಿಹಾಸವನ್ನು ತೋರಿಸುವ ಅದ್ಭುತ ಕಾರ್ಯಕ್ರಮವೆಂದಿದ್ದಾರೆ. ಇದು ನಮ್ಮ ಧರ್ಮದ ಬಗ್ಗೆ ತಿಳಿಯದ ವಿಷಯಗಳನ್ನು ತಿಳಿಸುತ್ತದೆ. ಅನೇಕ ದೇಶಗಳ ಹಿಂದುತ್ವನಿಷ್ಠರು, ಧಾರ್ಮಿಕ ಗುರುಗಳು ಮತ್ತು ಕಾರ್ಯಕರ್ತರನ್ನು ಒಟ್ಟುಗೂಡಿಸಿ ಹಿಂದುತ್ವ, ದೇಶ ಹಾಗೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ನ್ಯಾಯವಾದಿ ಅಮೃತೇಶ ಎನ್ ಪಿ, ಕರ್ನಾಟಕ ಉಚ್ಚ ನ್ಯಾಯಾಲಯ* : ಸನಾತನ ಸಂಸ್ಥೆಯ ಹಿಂದೂ ಜನಜಾಗೃತಿಯಿಂದ ಬೆಳೆದ ಹಿಂದೂ ರಾಷ್ಟ್ರದ ಸಂಕಲ್ಪ ಇಂದು ಹೆಮ್ಮರವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕೆಂಬುದು ಎಲ್ಲ ಹಿಂದೂಗಳ ಕನಸು ನನಸಾಗುವುದು ಖಚಿತ, ಹಿಂದೂ ರಾಷ್ಟ್ರ ಬಂದೇ ಬರುತ್ತದೆ.
ಶ್ರೀ ಶ್ರೀನಿವಾಸ ಗುರೂಜಿ , ಶ್ರೀರಾಮ ಸೇನೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೌರವಾಧ್ಯಕ್ಷರು : ಗೋವಾದಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಹಿಂದೂ, ದೇಶಭಕ್ತರು ಮತ್ತು ಸಂತರನ್ನು ಒಗ್ಗೂಡಿಸಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ ನೀಡಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಹಿಂದೂ ರಾಷ್ಟ್ರದ ಮಹತ್ವವನ್ನು ಒತ್ತಿಹೇಳಿದ ಈ ಕಾರ್ಯಕ್ರಮ. ಎಲ್ಲಾ ಹಿಂದೂಗಳನ್ನು ಒಂದೇ ವೇದಿಕೆಗೆ ತರುವ ಮತ್ತು ಅವರಿಗೆ ಧೈರ್ಯ ನೀಡುವ ಇಂತಹ ಕಾರ್ಯಕ್ರಮ ಭಾರತದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.
ಅಡ್ಡಂಡ ಕಾರ್ಯಪ್ಪ, ನಿರ್ದೇಶಕರು, ರಂಗಾಯಣ : ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ, ದೇಶ-ವಿದೇಶಗಳ ಸಂತರು ಹಿಂದೂ ರಾಷ್ಟ್ರ ಸ್ಥಾಪನೆ, ಹಿಂದೂಗಳ ಮೇಲಿನ ದಾಳಿಗಳ ನಿವಾರಣೆ ಮತ್ತು ಸರ್ಕಾರದ ಗಮನ ಸೆಳೆಯುವ ಅಗತ್ಯವನ್ನು ಒತ್ತಿಹೇಳಿದರು. 25 ಸಾವಿರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದ ಈ ಶಿಸ್ತುಬದ್ಧ ಕಾರ್ಯಕ್ರಮ, ಹಿಂದೂಗಳ ಒಗ್ಗಟ್ಟು ಮತ್ತು ರಾಷ್ಟ್ರೀಯತೆಯ ಮಹತ್ವವನ್ನು ಸಾರಿದೆ. ಇಲ್ಲಿಂದ ನಾವು ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು.
ಈ ಮಹೋತ್ಸವದಲ್ಲಿ ೧೫ ಸಂತರ ಪವಿತ್ರ ಪಾದುಕೆಗಳನ್ನು ದರ್ಶನ ಪಡೆಯುವ ಸುವರ್ಣಾವಕಾಶ ಭಕ್ತರಿಗೆ ದೊರಕಿತು, ಇದರಲ್ಲಿ ಕರ್ನಾಟಕದ ಬ್ರಹ್ಮಚೈತನ್ಯ ಶ್ರೀ ಗೊಂದಾವಲೇಕರ ಮಹಾರಾಜ, ಶ್ರೀ ಬ್ರಹ್ಮಾನಂದಜಿ ಮಹಾರಾಜ, ಪ. ಪೂ. ಶ್ರೀಧರಸ್ವಾಮೀಜಿ, ಹುಬ್ಬಳಿಯ ಸಿದ್ಧಾರೂಢ ಸ್ವಾಮೀಗಳ ಪಾದುಕೆಗಳ ದುರ್ಲಭ ದರ್ಶನದ ಲಾಭವನ್ನು ಸಾವಿರಾರು ಭಕ್ತರು ಪಡೆದುಕೊಂಡರು.
ಈ ಮಹೋತ್ಸವದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರಹಿತ ಸಾಧಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾರತದ ವಿಜಯಕ್ಕಾಗಿ ‘ಶತಚಂಡಿ ಯಾಗ’, ಶ್ರೀ ಲಲಿತಾ ತ್ರಿಶತೀ ಪೂಜೆ , ಎಲ್ಲರಿಗೂ ಉತ್ತಮ ಆರೋಗ್ಯಕ್ಕಾಗಿ ‘ಮಹಾಧನ್ವಂತರಿ ಯಾಗ’ , ಮತ್ತು ರಾಷ್ಟ್ರ ರಕ್ಷಣೆಗಾಗಿ ಸಾಮೂಹಿಕ ಹವನವನ್ನು ನಡೆಸಲಾಯಿತು.
ಈ ಮಹೋತ್ಸವದ ಒಂದು ಐತಿಹಾಸಿಕ ಮತ್ತು ಹೃದಯಸ್ಪರ್ಶಿ ಕ್ಷಣವೆಂದರೆ ಸನಾತನ ಧರ್ಮಧ್ವಜಾರೋಹಣ. ಈ ವೇಳೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಕರಕಮಲದಿಂದ ಸನಾತನ ಧರ್ಮಧ್ವಜವನ್ನು ಶಂಖನಾದ ಮತ್ತು ವೇದಮಂತ್ರ ಘೋಷದೊಂದಿಗೆ ಏರಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರ ಕಣ್ಣುಗಳಲ್ಲಿ ಅಭಿಮಾನ, ಹೃದಯದಲ್ಲಿ ಭಕ್ತಿ ಮತ್ತು ತುಟಿಗಳಲ್ಲಿ ಗುರುಗೀತೆ ಇತ್ತು. ಇಡೀ ವಾತಾವರಣ ಭಕ್ತಿಪರವಶವಾಗಿತ್ತು.